ಎಂಜಿಪಿ ಪಕ್ಷ ಬಿಜೆಪಿಯಲ್ಲಿ ವಿಲೀನ
ಪಣಜಿ: ಇತ್ತೀಚೆಗಷ್ಟೇ ಮಾಜಿ ಸಿಎಂ ದಿವಂಗತ ಮನೋಹರ್ ಪರಿಕ್ಕರ್ ಅವರ ಸಾವಿನ ಬಳಿಕ ರಾಜಕೀಯವಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಗೋವಾದಲ್ಲಿ ಮತ್ತೆ ರಾತ್ರೋ ರಾತ್ರ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದ್ದು, ಬಿಜೆಪಿಯ ಮೈತ್ರಿ ಪಕ್ಷ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಅಷ್ಟು ಮಾತ್ರವಲ್ಲದೆ ಮತ್ತೊಂದು ಪ್ರಮುಖ ಬೆಳವಣಿಗೆ ಕೂಡ ನಡೆದಿದ್ದು, ಮೈತ್ರಿ ಪಕ್ಷ ಎಂಜಿಪಿ ಬಿಜೆಪಿಯೊಂದಿಗೆ ವಿಲೀನ ಕೂಡ ಆಗಿದೆ. ಆ ಮೂಲಕ ಗೋವಾದಲ್ಲಿ ಬಿಜೆಪಿ ಶಾಸಕರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ನೂತನ ಸಿಎಂ ಪ್ರಮೋದ್ ಸಾವಂತ್ ರ ಕೈ ಮತ್ತಷ್ಟು ಬಲಿಷ್ಟವಾದಂತಾಗಿದೆ.
ಎಂಜಿಪಿ ಶಾಸಕರಾದ ಮನೋಹರ್ ಅಜಗಾಂವ್ಕರ್ ಮತ್ತು ದೀಪಕ್ ಪಾವಸ್ಕರ್ ಅವರು ಗೋವಾ ವಿಧಾನಸಭೆ ಸ್ಪೀಕರ್ ಮೈಕಲ್ ಲೊಬೊ ಅವರಿಗೆ ತಡರಾತ್ರಿ 1:45 ರ ಸುಮಾರಿಗೆ ಪತ್ರವೊಂದನ್ನು ನೀಡಿ, ಬಿಜೆಪಿಯೊಂದಿಗೆ ಎಂಜಿಪಿಯನ್ನು ವಿಲೀನಗೊಳಿಸುವಂತೆ ಮನವಿ ಮಾಡಿದ್ದರು. ಸ್ಪೀಕರ್ ಅವರು ಅದಕ್ಕೆ ಸಮ್ಮತಿ ಸೂಚಿಸಿದ್ದು, ಇದೀಗ ಅದಕ್ಕೆ ಬಿಜೆಪಿ ಬಲ 14(36 ಒಟ್ಟು ಶಾಸಕರ ಸಂಖ್ಯೆ) ಕ್ಕೇರಿದೆ. ಎಂಜಿಪಿಯ ಮೂವರು ಶಾಸಕರಲ್ಲಿ ಇಬ್ಬರು ಪತ್ರಕ್ಕೆ ಸಹಿ ಮಾಡಿದ್ದರೆ, ಹಾಲಿ ಉಪಮುಖ್ಯಮಂತ್ರಿ ಸುದಿನ್ ದವಾಲಿಕರ್ ಅವರು ಮಾತ್ರ ಪತ್ರಕ್ಕೆ ಸಹಿಮಾಡಲು ಸಿದ್ಧರಿಲ್ಲ ಎಂದಿದ್ದಾರೆ.
ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣ ನಿಧನರಾದ ನಂತರ ಅವರ ಅಂತ್ಯಕ್ರಿಯೆಯ ದಿನ ರಾತ್ರಿಯೇ ಬಿಜೆಪಿ ವಿಧಾನಸಭೆ ಸ್ಪೀಕರ್ ಆಗಿದ್ದ ಡಾ.ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos