ದೇಶ

ಪುಲ್ವಾಮಾ ದಾಳಿಯ ಕುರಿತ ಪಾಕಿಸ್ತಾನದ ಹೇಳಿಕೆಯಿಂದ ನಿರಾಶೆಯಾಗಿದೆ: ಭಾರತ ವಿದೇಶಾಂಗ ಇಲಾಖೆ

Raghavendra Adiga
ನವದೆಹಲಿ: ಪುಲ್ವಾಮಾ ಉಗ್ರ ದಾಳಿಯಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕೈವಾಡವಿರುವುದನ್ನು ಒಪ್ಪಿಕೊಳ್ಳಲು ಪಾಕಿಸ್ತಾನ "ನಿಧಾನಿಸುತ್ತಿದೆ" ಎಂದಿರುವ ಭಾರತ ಗಡಿಯುದ್ದದ ಭಯೋತ್ಪಾದನೆ ಕುರಿತ ಫಾಕಿಸ್ತಾನದ ಪ್ರತಿಕ್ರಿಯೆಯಿಂದ ನಿರಾಶವಾಗಿರುವುದಾಗಿ ಹೇಳಿದೆ.
ಫೆಬ್ರವರಿ 14 ರ ಭಯೋತ್ಪಾದನಾ ದಾಳಿಯಲ್ಲಿ ಜೆಇಎಂ ಪಾತ್ರ ಹಾಗೂ ಭಾರತ ನಡೆಸಿದ್ದ ವಾಯುದಾಳಿಯಲ್ಲಿ ಪಾಕ್ ಆಳ್ವಿಕೆಯಲ್ಲಿನ ಕಾಶ್ಮೀರದಲ್ಲಿ ಉಗ್ರ ಶಿಬಿರಗಳು ಣಾಶವಾಗಿರುವುದಕ್ಕೆ ಹೆಚ್ಚಿನ ಮಾಹಿತಿ ಮತ್ತು ಪುರಾವೆಗಳನ್ನು ದೆಹಲಿ ನೀಡಬೇಕಿದೆ ಎಂದು ಪಾಕಿಸ್ತಾನ ಕೇಳಿದ್ದ ಒಂದು ದಿನದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ.
"ಪಾಕಿಸ್ತಾನದ ಭಯೋತ್ಪಾದನಾ ಶಿಬಿರಗಳು ಮತ್ತು ಪುಲ್ವಾಮಾ ದಾಳಿಯಲ್ಲಿ ಜೆಇಎಂ ಉಗ್ರ ಸಂಘಟನೆ ಪಾತ್ರ ಬಗೆಗಿನ ನಮ್ಮ ವಿವರವಾದ ದಾಖಲೆಗಳನ್ನು ನೋಡಿಯೂ ಪಾಕಿಸ್ತಾನ ಈ ರೀತಿ ಪ್ರತಿಕ್ರಯಿಸಿರುವುದು ನಮಗೆ ನಿರಾಸೆ ತಂದಿದೆ." ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
"ವಿಷಾದನೀಯ ವಿಚಾರವೆಂದರೆ ತಮ್ಮ ನೆಲದಲ್ಲಿ ಉಗ್ರವಾದಿಗಳಿರುವುದನ್ನು ಪಾಕಿಸ್ತಾನ ಈಗಲೂ ನಿರಾಕರಿಸುತ್ತಿದೆ.ಮತ್ತು ಪುಲ್ವಾಮಾ ದಾಳಿಯನ್ನು ಒಂದು ಭಯೋತ್ಪಾದಕ ದಾಳಿ ಎಂದು ಒಪ್ಪಲು ಸಹ ನಿರಾಕರಿಸಿದೆ" ಎಂದು ಅವರು ಹೇಳಿದರು.
ಪಾಕಿಸ್ತಾನವು ಈ ಹಿಂದೆ ಇದೇ ರೀತಿಯ ವಾದವನ್ನು ಒಪ್ಪಿಸಿತ್ತು.ಇದು ಭಾರತಕ್ಕೇನೂ ಹೊಸದಲ್ಲ.  2008 ರ ಮುಂಬಯಿ ಭಯೋತ್ಪಾದಕ ದಾಳಿ ಅಥವಾ 2016 ರಲ್ಲಿ ಪಠಾಣ್ ಕೋಟ್ ದಾಳಿಯ ವೇಳೆ ಸಹ ಪಾಕ್ ಇದೇ ಬಗೆಯಲ್ಲಿ ವಾದ ಮಾಡಿದೆ.
ಪುಲ್ವಾಮಾ ದಾಳಿಯ ಕುರಿತು ಭಾರತ ನೀಡಿದ ಸಾಕ್ಷಾಧಾರವನ್ನು ಪಾಕ್ ಪರಿಶೀಲಿಸುತ್ತಿದೆ.ಅದರ ಮಣ್ಣಿನಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರು ಅಥವಾ ಭಯೋತ್ಪಾದಕ ಗುಂಪು ಈ ಕೃತ್ಯ ನಡೆಸಿವೆ ಎನ್ನಲು ಭಾರತ ನಂಬಲರ್ಹ ದಾಖಲೆಗಳನ್ನು ನೀಡಿಲ್ಲ ಎಂದು ಪಾಕಿಸ್ತಾನ ಮೊಂಡುವಾದ ಮಾಡಿದೆ.
ಭಾರತವು ಫೆಬ್ರುವರಿ 27 ರಂದು ಪಾಕಿಸ್ತಾನದ ಹೈಕಮಿಷನರ್ ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಪುಲ್ವಾಮಾ ದಾಳಿಯನಿರ್ದಿಷ್ಟವಾದ ವಿವರಗಳೊಂದಿಗೆ ಜೆಇಎಂ ಪಾತ್ರದ ವಿವರಣೆ ನಿಡಿದೆ.ಅಲ್ಲದೆ ದಾಳಿಯಲ್ಲಿ 40  ಸಿಆರ್ ಪಿಎಫ್ ಸಿಬ್ಬಂದಿ ಹತರಾದದ್ದು, ಆನಂತರ ಭಾರತ ನಡೆಸಿದ್ದ ಏರ್ ಸ್ಟ್ರೈಕ್ ನಲ್ಲಿ ಪಾಕಿಸ್ತಾನದಲ್ಲಿ ಜೆಎಂ ಭಯೋತ್ಪಾದನಾ ಶಿಬಿರಗಳು ಮತ್ತು ಅದರ ನಾಯಕರ ಅಂತ್ಯವಾಗಿರುವ ಮಾಹಿತಿಯನ್ನೂ ನೀಡಲಾಗಿದೆ.
ಯುಎನ್  ಕಪ್ಪುಪಟ್ಟಿಗೆ ಸೇರ್ಪಡಿಸಿರುವ ಉಗ್ರ ಸಂಘಟನೆ ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ಪಾಕಿಸ್ತಾನದಲ್ಲಿರುವುದು ಶತಸ್ಸಿದ್ದವಾಗಿರುವ ಸಂಗತಿ. ಇದನ್ನು ಪಾಕ್ ಸಚಿವರೇ ಮಾದ್ಯಮದೆದುರು ಒಪ್ಪಿಕೊಂಡಿದ್ದಾರೆ  ಆದರೂ "ಸಾಕಷ್ಟು ಕ್ರಮಬದ್ಧವಾದ ಮಾಹಿತಿಯ ಕೊರತೆ ಮತ್ತುಬೇಕಾದಷ್ಟು ಸಾಖ್ಯಾಧಾರವಿಲ್ಲ" ಎನ್ನುವ ಮೂಲಕ ಪಾಕಿಸ್ತಾನ ತನ್ನ ನಾಟಕವನ್ನು ಮುಂದುವರಿಸಿದೆ ಎಂದು ಕುಮಾರ್ ಹೇಳಿದ್ದಾರೆ.
SCROLL FOR NEXT