ನವದೆಹಲಿ: ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮತದಾನ ಸಮಯವನ್ನು ಬದಲಿಸಬೇಕು ಎಂಬ ಬೇಡಿಕೆಯನ್ನು ಭಾರತ ಚುನಾವಣಾ ಆಯೋಗ ತಿರಸ್ಕರಿಸಿದೆ.
ಲೋಕಸಭಾ ಚುನಾವಣೆಯಲ್ಲಿ 5ನೇ ಹಂತದ ಮತದಾನ ಸೋಮವಾರ ಏಳು ರಾಜ್ಯಗಳಲ್ಲಿ 51 ಕ್ಷೇತ್ರಗಳಲ್ಲಿ ನಡೆಯಲಿದೆ.ಇದಕ್ಕಾಗಿ ಎಲ್ಲಾ ಸಿದ್ದತೆಗಳಾಗಿದೆ.
2019 ರ ಸಾರ್ವತ್ರಿಕ ಚುನಾವಣೆಗಳ 5, ,6 ಹಾಗೂ 7 ನೇ ಹಂತದ ಮತದಾನದ ಸಮಯ ಬದಲಾಯಿಸಬೇಕು. ಎಂದರೆ ಬೆಳಿಗ್ಗೆ ಏಳರ ಬದಲಿಗೆ ಐದು ಗಂಟೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಲಾಗಿತ್ತು. ಮೇ 2ರಂದು ಕೋರ್ಟ್ ಆಯೋಗವು ಚುನಾವಣೆ ಮತದಾನದ ಸಮಯ ಬದಲಾವಣೆಗೆ ಅವಕಾಶ ಮಾಡಿಕೊಡುವ ಬಗೆಗೆ ನಿರ್ಧರಿಸಬೇಕು ಎಂದು ಹೇಳಿತ್ತು.
ಮೊಹಮ್ಮದ್ ನಿಜಾಮುದ್ದೀನ್ ಪಾಶಾ ಎಂಬ ವಕೀಲರು ಈ ಅರ್ಜಿ ಸಲ್ಲಿಸಿದ್ದರು.
ಇದೀಗ ಚುನಾವಣಾ ಆಯೋಗ ಉಳಿದ ಮೂರೂ ಹಂತಗಳಲ್ಲಿ ಮತದಾನದ ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.