ನವದೆಹಲಿ: ಭಾರತೀಯ ವಾಯು ಪಡೆ ಪಾಕಿಸ್ಥಾನದ ಬಾಲಾಕೋಟ್ ನಲ್ಲಿನ ಜೈಶ್ ಉಗ್ರ ತರಬೇತಿ ಕಟ್ಟಡದ ಮೇಲೆ ನಡೆಸಿದ್ದ ಬಾಂಬ್ ದಾಳಿಯಲ್ಲಿ ಸುಮಾರು 170ರಷ್ಟು ಉಗ್ರರು ಹತರಾಗಿದ್ದರೆ ಎಂಬುದನ್ನು ಇಟಲಿ ಪತ್ರಕರ್ತೆ ಫ್ರಾನ್ಸೆಸ್ಕಾ ಮ್ಯಾರಿನೋ ಇದೀಗ ತಡವಾಗಿ ಬಹಿರಂಗಪಡಿಸಿದ್ದಾರೆ.
ಈ ವಿಷಯವನ್ನು ಬಾಲಾಕೋಟ್ ದಾಳಿ ನಡೆದ ತತ್ಕ್ಷಣದಲ್ಲೇ ವರದಿ ಮಾಡಿರುತ್ತಿದ್ದರೆ ಪಾಕಿಸ್ಥಾನದಲ್ಲಿನ ತನ್ನ ಸುದ್ದಿ ಮೂಲಗಳಿಗೆ ಅಪಾಯ ಒದಗುವುದು ಖಚಿತವಿತ್ತು; ಅದಕ್ಕಾಗಿ ತಾನು ಈ ವಿಷಯವನ್ನು ತಡವಾಗಿ ವರದಿ ಮಾಡುವುದು ಅನಿವಾರ್ಯವಾಯಿತು ಫ್ರಾನ್ಸೆಸ್ಕಾ ಮ್ಯಾರಿನೋ ಹೇಳಿದ್ದಾರೆ.
ಭಾರತೀಯ ವಾಯು ಪಡೆಯ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಜೈಶ್ ಉಗ್ರರ ಮನೆಯವರು ಮತ್ತು ಕುಟುಂಬದವರಿಗೆ ಅಪಾರ ಜೀವ ಹಾನಿಯಾಗಿರುವ ಬಗ್ಗೆ ಬಾಯಿ ಮುಚ್ಚಿಕೊಂಡು ಸುಮ್ಮನಿರಲು ಪ್ರಧಾನಿ ಇಮ್ರಾನ್ ಖಾನ್ ಸರಕಾರ ಲಂಚ ನೀಡಿ ಜೀವ ಬೆದರಿಕೆ ಒಡ್ಡಿದ್ದರಿಂದ ಉಗ್ರರು ಹತರಾದ ವಿಷಯ ಬಹಿರಂಗಕ್ಕೆ ಬರಲೇ ಇಲ್ಲ ಎಂದು ಹೇಳಿದ್ದಾರೆ.
ಬಾಲಾಕೋಟ್ ಮೇಲಿನ ಐಎಎಫ್ ವಾಯು ದಾಳಿಯಲ್ಲಿ 130ರಿಂದ 170 ಜೈಶ್ ಉಗ್ರರು ಹತರಾದರೂ ಅದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಗೊತ್ತಾಗದ ರೀತಿಯಲ್ಲಿ ಮುಚ್ಚಿಡುವ ಸರ್ವ ಪ್ರಯತ್ನವನ್ನು ಇಮ್ರಾನ್ ಖಾನ್ ಸರಕಾರ ಮಾಡಿತು ಎಂದು ಹೇಳಿದರು.
ಐಎಎಫ್ ವಾಯು ದಾಳಿಯಲ್ಲಿ ಗಾಯಗೊಂಡ ಅನೇಕ ಜೈಶ್ ಉಗ್ರರು ಈಗಲೂ ಪಾಕ್ ಮಿಲಿಟರಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರನ್ನು ಯಾವ ಆಸ್ಪತ್ರೆಗೂ ಸೇರಿಸಲಾಗಿಲ್ಲ ಎಂದು ಮ್ಯಾರಿನೋ ತಿಳಿಸಿದ್ದಾರೆ.