ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಸರ್ವೋಚ್ಚ ನ್ಯಾಯಾಲಯದ ಆಂತರಿಕ ತನಿಖಾ ಸಮಿತಿ ಕ್ಲೀನ್ಚಿಟ್ ನೀಡುವ ಮೂಲಕ ದೂರುದಾರ ಮಹಿಳೆಗೆ ಮತ್ತು ಮುಖ್ಯ ನ್ಯಾಯಮೂರ್ತಿ ಹುದ್ದೆ ಹಾಗೂ ಸುಪ್ರೀಂ ಕೋರ್ಟ್ ಸಂಸ್ಥೆಗೆ ತೀವ್ರ ಅನ್ಯಾಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಪತ್ರಕರ್ತ ಅರುಣ್ ಶೌರಿ ಆಕ್ಷೇಪಿಸಿದ್ದಾರೆ.
ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನ ಆಂತರಿಕ ಸಮಿತಿಯ ಸದಸ್ಯರು ಕ್ಲಬ್ ನ ಸದಸ್ಯರಂತೆ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದರು.
ದೆಹಲಿಯಲ್ಲಿ ನಿನ್ನೆ ನಾನಿ ಪಲ್ಕಿವಾಲಾ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಪದೊಂದಿಗೆ ವ್ಯವಹರಿಸುವ ಸಂಪೂರ್ಣ ಪ್ರಕ್ರಿಯೆಯಲ್ಲಿನ ದೌರ್ಬಲ್ಯ ಇಲ್ಲಿ ಎದ್ದು ಕಾಣುತ್ತದೆ. ಆಂತರಿಕ ಸಮಿತಿಯ ಮೂವರು ಸದಸ್ಯರು ಸಿಜೆಐ ಅನ್ನು ರಕ್ಷಿಸಿದ್ದಾರೆ ಎಂಬ ಸಂಶಯ ಇಲ್ಲಿ ಎದ್ದು ಕಾಣುತ್ತಿದ್ದು ಅದು ನ್ಯಾಯಾಲಯದ ವಿಶ್ವಾಸಾರ್ಹತೆಯನ್ನು ತಗ್ಗಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ವಕೀಲರು ಮತ್ತು ಬೇರೆ ವೃತ್ತಿಯಲ್ಲಿರುವವರು ಏನು ಮಾಡುತ್ತಾರೆ ಎಂಬ ವಿಷಯದ ಮೇಲೆ ಅರುಣ್ ಶೌರಿ ಉಪನ್ಯಾಸ ನೀಡುತ್ತಿದ್ದರು.
ಆರೋಪಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿಚಾರಣೆಯಲ್ಲಿನ ದೌರ್ಬಲ್ಯ ಹಾಗೂ ಅಸಮಾನತೆ ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಆಂತರಿಕ ಸಮಿತಿಯ ಮೂವರು ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಗಳನ್ನು ರಕ್ಷಿಸಿದ್ದಾರೆ ಎಂಬುದು ಇಲ್ಲಿ ಅನುಮಾನಾಸ್ಪದವಾಗಿ ಕಾಡುತ್ತದೆ. ಅವರನ್ನು ಪ್ರಕರಣದಲ್ಲಿ ರಕ್ಷಿಸುವ ಅಗತ್ಯವಿರಲಿಲ್ಲ. ಇದು ದೀರ್ಘಕಾಲ ಅನುಮಾನವಾಗಿಯೇ ಕಾಡಲಿದ್ದು ಸುಪ್ರೀಂ ಕೋರ್ಟ್ ನ ವಿಶ್ವಾಸಾರ್ಹತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂದೇಹ ಮೂಡಿಸುತ್ತದೆ ಎಂದರು.
ಎಷ್ಟೇ ಅನ್ಯಾಯವಾಗಿರಲಿ, ಸಂಶಯ ಮನೋವೃತ್ತಿ ಸಂದೇಹವನ್ನು ಇನ್ನಷ್ಟು ಬಲಪಡಿಸುತ್ತದೆ. ಸಂಸ್ಥೆಯ ಗೌರವವನ್ನು ರಕ್ಷಿಸಲು ಸಾಂಸ್ಥಿಕ ನಿಷ್ಠೆಯನ್ನು ಕೆಡಿಸಲು ನೋಡುತ್ತಾರೆ. ಅದು ಕ್ಲಬ್ ಸಂಸ್ಕೃತಿಯೇ ಹೊರತು ಸಂಸ್ಥೆಯ ಘನತೆ, ಗೌರವಕ್ಕೆ ತಕ್ಕದ್ದಲ್ಲ. ಒಂದು ಸಂಸ್ಥೆ ಎಂದು ಬಂದಾಗ ಅದರ ಪಾರದರ್ಶಕತೆ ಬಗ್ಗೆ ಜನ ನೋಡುತ್ತಾರೆ ಎಂದರು.
ದೂರುದಾರರು ಕೇಳಿದ್ದಕ್ಕೆ ಆಂತರಿಕ ತನಿಖಾ ಸಮಿತಿ ವರದಿ ನೀಡುವುದಕ್ಕೆ ನಿರಾಕರಿಸುವ ಮೂಲಕ ಸುಪ್ರೀಂ ಕೋರ್ಟ್ ಸಿಬಿಐ ರೀತಿ ವರ್ತಿಸಿದೆ. ಸಿಬಿಐಯಲ್ಲಿ ಕೇಸಿನ ದಾಖಲೆಯಲ್ಲಿ ದೂರುದಾರರು ನೀಡಿದ ಹೇಳಿಕೆಗಳ ಪ್ರತಿಯನ್ನು ನೀಡುವುದಿಲ್ಲ. ಅವರು ಏನು ಹೇಳಿದ್ದಾರೆ ಎಂದು ಕೇಳಲು ಸಹ ಸಿಬಿಐ ಬಿಡುವುದಿಲ್ಲ, ಸಿಬಿಐಯ ಪದ್ಧತಿ ಇದೀಗ ಸುಪ್ರೀಂ ಕೋರ್ಟ್ ಗೆ ಕೂಡ ಬಂದಿದೆ ಎಂದರು.