ಇಂಫಾಲ: ಮಣಿಪುರದಲ್ಲಿ ಕೇಸರಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ಹೊರ ಬರಲು ನಾಗಾ ಪೀಪಲ್ಸ್ ಫ್ರಂಟ್ (ಎನ್ಪಿಎಫ್) ನಿರ್ಧರಿಸಿದೆ.
ಈ ಸಂಬಂಧ ಇಂದು ನಡೆದ ಪಕ್ಷದ ಶಾಸಕರ ಹಾಗೂ ನಾಯಕರ ಸಭೆಯಲ್ಲಿ ಬಿಜೆಪಿಗೆ ನೀಡಿದ ಬೆಂಬಲವನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಂಡಿದೆ ಎಂದು ಎನ್ ಪಿಎಫ್ ನಾಯಕ ಟಿಆರ್ ಝೆಲಿಯಾಂಗ್ ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ತನ್ನ ಆಲೋಚನೆ, ಸಲಹೆ, ಸೂಚನೆಗಳಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಎನ್ಪಿಎಫ್ ಆರೋಪಿಸಿದೆ. ಆದರೆ ಎನ್ಪಿಎಫ್ ನ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಮೈತ್ರಿ ಸರಕಾರ ಸಾಂಗವಾಗಿ ನಡೆಯಲು ತಾನು ಮಿತ್ರ ಪಕ್ಷ ಎನ್ಪಿಎಫ್ ಗೆ ಎಲ್ಲ ರೀತಿಯ ಸಹಕಾರ, ಸೌಕರ್ಯಗಳನ್ನು ನೀಡಿದ್ದೇನೆ ಎಂದು ಹೇಳಿದೆ.
60 ಸದಸ್ಯ ಬಲದ ಮಣಿಪುರ ವಿಧಾಸಭೆಯಲ್ಲಿ ಎನ್ ಪಿಎಫ್ ನಾಲ್ವರು ಶಾಸಕರನ್ನು ಹೊಂದಿದೆ. ಎನ್ ಪಿಎಫ್ ಬೆಂಬಲ ಹಿಂಪಡೆದರೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ.