ಮುಂಬೈ: ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಕಿರಿಯ ವೈದ್ಯೆ ಡಾ. ಪಾಯಲ್ ತದ್ವಿ ಅವರ ಆತ್ಮಹತ್ಯೆಗೆ ಪ್ರಚೋದನ ನೀಡಿದ ಆರೋಪದ ಮೇಲೆ ಡಾ.ಭಕ್ತಿ ಮೆಹಾರೆ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಮೇ 22ರಂದು ನಡೆದ ಡಾ.ಪಾಯಲ್ ತದ್ವಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತಿ ಮೆಹಾರೆ ಅವರನ್ನು ಸುದೀರ್ಘ ವಿಚಾರಣೆ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಹಾರೆ ಅವರು ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯೆಯಾಗಿದ್ದು, ತರಬೇತಿ ಪಡೆಯುತ್ತಿದ್ದ ಸ್ನಾತಕೋತ್ತರ ವಿದ್ಯಾರ್ಥಿನಿ ಪಾಯಲ್ ಗೆ ಜಾತಿ ನಿಂದನೆ ಮಾಡಿ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಪಾಯಲ್ ಆತ್ಮಹತ್ಯೆ ಪ್ರಕರಣದಲ್ಲಿ ಆಸ್ಪತ್ರೆಯ ಇತರೆ ಇಬ್ಬರು ವೈದ್ಯರಾದ ಅಂಕಿತಾ ಖಂಡೆವಾಲ್ ಹಾಗೂ ಹೇಮಾ ಅಹುಜಾ ಅವರು ಆರೋಪಿಗಳಾಗಿದ್ದು, ನಿರೀಕ್ಷಣಾ ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾ ಭಕ್ತಿ ಮೇಹರ್, ಡಾ. ಅಂಕಿತಾ ಖಂಡಲೆವಾಲ್ ಹಾಗೂ ಡಾ. ಹೇಮಾ ಅಹುಜಾ ಅವರು ಜಾತಿ ವಿಚಾರದಲ್ಲಿ ಪಾಯಲ್ ಅವರನ್ನ ನಿಂದಿಸುತ್ತಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ಪಾಯಲ್ ಪತಿ ಈ ಹಿಂದೆ ಕಾಲೇಜಿಗೆ ದೂರು ಕೂಡ ನೀಡಿದ್ದರು ಎನ್ನಲಾಗಿದೆ. ಪಾಯಲ್ ಆತ್ಮಹತ್ಯೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಸಾವಿನ ನ್ಯಾಯಕ್ಕಾಗಿ ದೊಡ್ಡ ಹೋರಾಟವೇ ನಡೆದಿತ್ತು.
ನಂತರ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪಾಯಲ್ ಆತ್ಮಹತ್ಯೆ ಕೇಸ್ ಮಹಾರಾಷ್ಟ್ರ ಸರ್ಕಾರಕ್ಕೂ ಬಿಸಿ ಮುಟ್ಟಿಸಿತ್ತು. ನಂತರ ಸಿಎಂ ದೇವೇಂದ್ರ ಪಡ್ನವಿಸ್ ಪ್ರಕರಣ ಸಂಬಂಧ ತನಿಖೆಯನ್ನ ಚುರುಕುಗೊಳಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಸದ್ಯ ಓರ್ವ ಆರೋಪಿಯನ್ನ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಡಾ.ಹೇಮಾ, ಡಾ. ಅಂಕಿತಾ ಖಂಡಲೆವಾಲ್ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos