ದೇಶ

ವಾಟ್ಸಪ್ ಮೂಲಕ ಗೂಢಚರ್ಯೆಗೆ ಇಸ್ರೇಲ್ ನೆರವು ಪಡೆಯುತ್ತಿದೆಯೇ ಕೇಂದ್ರ ಸರ್ಕಾರ?

Srinivasamurthy VN

ನವದೆಹಲಿ: ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಮೂಲಕ ಕೇಂದ್ರ ಸರ್ಕಾರ ಗೂಢಚಾರ ಮಾಡುತ್ತಿದ್ದು, ಇದಕ್ಕಾಗಿ ಇಸ್ರೇಲ್ ದೇಶದ ನೆರವು ಪಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಈ ಕುರಿತಂತೆ ಸುದ್ದಿಸಂಸ್ಛೆಯೊಂದು ವರದಿ ಮಾಡಿದ್ದು, ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳನ್ನು ಬಂಧಿಸಲು ಸಾಕ್ಷ್ಯ ಎನ್ನಲಾದ ಪತ್ರಗಳನ್ನು ಇಸ್ರೇಲಿನ ಸೈಬರ್ ಸ್ಪೈವೇರ್ ಅನ್ನು ಮೊಬೈಲ್ ಮತ್ತು ಕಂಪ್ಯೂಟರುಗಳಲ್ಲಿ ಇರಿಸಿರುವ ಸಂಶಯ ಮೂಡುತ್ತಿದೆ. ಪತ್ರಕರ್ತರು, ದಲಿತ ಮುಖಂಡರು, ಮಾನವ ಹಕ್ಕು ಹೋರಾಟಗಾರರ ಮೊಬೈಲುಗಳ ಗೂಢಚಾರಣೆ ಮಾಡಲಾಗಿದೆ ಎನ್ನಲಾಗಿದೆ.

ವರದಿಯಲ್ಲಿರುವಂತೆ ವಾಟ್ಸಪ್ ಮೂಲಕ ಸ್ಪೈವೇರ್ ಸಂದೇಶ ಕಳುಹಿಸಿ ದೇಶ ವಿದೇಶಗಳ 1,400 ಮಂದಿಯ ಮಾಹಿತಿಗಳನ್ನು ಸರ್ಕಾರದ ಪರವಾಗಿ ಸಂಗ್ರಹಿಸಲಾಗಿದೆ ಎಂದು ಫೇಸ್ ಬುಕ್ ಅಮೆರಿಕಾದ ಕ್ಯಾಲಿಫೋರ್ನಿಯ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಇಸ್ರೇಲ್ ದೇಶದ NSO GROUP TECHNOLOGIES LIMITED ಮತ್ತದರ ಮಾತೃ ಸಂಸ್ಥೆ Q CYBER TECHNOLOGIES LIMITED ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

ಈ ಪ್ರಕರಣ ದಾಖಲಾಗುವುದರೊಂದಿಗೆ ಫೇಸ್ ಬುಕ್ ಸಂಸ್ಥೆಗೆ ಸೇರಿದ ವಾಟ್ಸಪ್ ಸೋಶಿಯಲ್ ಮಿಡಿಯಾ ಅಪ್ಲಿಕೇಶನ್ ಬಳಕೆ ಮಾಡುವ ನೂರಕ್ಕೂ ಹೆಚ್ಚು ಮಂದಿ ಪತ್ರಕರ್ತರು, ದಲಿತ ಮುಖಂಡರು, ಮಾನವ ಹಕ್ಕು ಹೋರಾಟಗಾರರ ಬಗ್ಗೆ ಗೂಢಚರ್ಯೆ ನಡೆಸಲಾಗಿತ್ತು ಎಂದು ಹೇಳಲಾಗಿದೆ. ಈ ಮಧ್ಯೆ, ಸೈಬರ್ ಗೂಢಚರ್ಯೆ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ವಾಟ್ಸಪ್ ಕಂಪೆನಿಗೆ ಪತ್ರ ಬರೆದಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಎನ್ಎಸ್ಓ ಗ್ರೂಪ್ ಸಿದ್ಧಪಡಿಸಿದ ಪೆಗಾಸಸ್ ಎಂಬ ಹೆಸರಿನ ಸ್ಪೈವೇರ್ ಉಪಯೋಗಿಸಿ ವಿಶ್ವದ ಹಲವು ದೇಶಗಳ ಸರ್ಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಡಚರ್ಯೆ ನಡೆಸಲಾಗುತ್ತಿರುವುದು ಇದೀಗ ಇನ್ನಷ್ಟು ಖಚಿತವಾಗುತ್ತಿದೆ. ಇದೇ ಸ್ಕೈವೇರ್ ಅನ್ನು ಬಳಕೆ ಮಾಡಿ ಭಾರತದ ಕೆಲವು ಮಂದಿ ಪತ್ರಕರ್ತರು, ನಾಗರಿಕ ಹಕ್ಕುಗಳ ಹೋರಾಟಗಾರರ ಮೇಲೂ ಗೂಢಚರ್ಯೆ ನಡೆಸಲಾಗಿದೆ ಎನ್ನಲಾಗಿದೆ.

SCROLL FOR NEXT