ಕೋಲ್ಕತ್ತಾ: ಕೇಂದ್ರ ಸರ್ಕಾರ ತಮ್ಮ ಟೆಲಿಫೋನ್ ನ್ನು ಕದ್ದಾಲಿಕೆ ಮಾಡಿದ್ದು ಇದಕ್ಕೆ ತಮ್ಮಲ್ಲಿ ಸಾಕ್ಷಿಗಳಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಜಾಗ್ರತೆ ವಹಿಸಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸ ಆರೋಪ ಮಾಡಿದ್ದಾರೆ.
ಇಸ್ರೇಲ್ ದೇಶದ ಸಂಸ್ಥೆ ಸರ್ಕಾರಕ್ಕೆ ಸೋಷಿಯಲ್ ಮೀಡಿಯಾ ಆಪ್ ವಾಟ್ಸಾಪ್ ನ ಗೂಢಚರ್ಯೆ ಮಾಡಲು ಯಂತ್ರಗಳ ಪೂರೈಕೆ ಮಾಡಿರುವುದು ಸುಳ್ಳಲ್ಲ. ನನ್ನ ಟೆಲಿಫೋನ್ ನ್ನು ಕದ್ದಾಲಿಕೆ ಮಾಡಲಾಗಿದೆ. ನನ್ನಲ್ಲಿ ಈ ಬಗ್ಗೆ ಸಾಕ್ಷಿಗಳಿರುವುದರಿಂದ ನನಗೆ ಇದು ಗೊತ್ತಿದೆ ಎಂದರು.
ಭಾರತದಲ್ಲಿ ಬಳಕೆದಾರರ ಖಾಸಗಿತನವನ್ನು ವಾಟ್ಸಾಪ್ ಸಂಸ್ಥೆ ಉಲ್ಲಂಘಿಸಿದೆ ಎಂದು ನಿನ್ನೆ ಬಂದಿರುವ ಸುದ್ದಿಗೆ ಪ್ರತಿಕ್ರಿಯೆಯಾಗಿ ಅವರು ಈ ಮಾತನ್ನು ಹೇಳಿದ್ದು ಕೇಂದ್ರ ಸರ್ಕಾರ ದೇಶದ ರಾಜಕೀಯ ನಾಯಕರು, ಪತ್ರಕರ್ತರು, ವಕೀಲರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ಪ್ರಮುಖ ವ್ಯಕ್ತಿಗಳ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂದು ಆರೋಪಿಸಿದರು.
ದೇಶದ ಪ್ರಮುಖ ವ್ಯಕ್ತಿಗಳ, ಕಾರ್ಯಕರ್ತರು, ಸಂಘಟನೆಗಳ ಚಟುವಟಿಕೆಗಳ ಮೇಲೆ ಗೂಢಚರ್ಯೆ ನಡೆಸಲು ಇಸ್ರೇಲ್ ಮೂಲದ ಕಂಪೆನಿಯನ್ನು ಬಳಸಿಕೊಂಡಿದೆ. ಇನ್ನೊಬ್ಬರ ಖಾಸಗಿತನದ ಮೇಲೆ ಕಣ್ಣಿಡುವುದು ತಪ್ಪು ಕೆಲಸ. ಹಿಂದೆ ವಾಟ್ಸಾಪ್ ಬಳಕೆದಾರರಿಗೆ ಸುರಕ್ಷಿತವಾಗಿತ್ತು. ಆದರೆ ಇಂದು ವ್ಯಕ್ತಿಗಳ ಸಂದೇಶ ಮತ್ತು ಮಾತುಕತೆಗಳನ್ನು ವಾಟ್ಸಾಪ್ ಮೂಲಕ ಕದ್ದಾಲಿಸಲಾಗುತ್ತಿದೆ. ಹೀಗಾಗಿ ಇಂದು ನಮ್ಮ ದೇಶದಲ್ಲಿ ವಾಟ್ಸಾಪ್, ಸ್ಥಿರ ದೂರವಾಣಿ, ಮೊಬೈಲ್ ಫೋನ್ ಯಾವುದು ಕೂಡ ಸುರಕ್ಷಿತವಾಗಿಲ್ಲ. ಕದ್ದಾಲಿಕೆ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಟೀಕಿಸಿದರು.