ದೇಶ

ಉಪಚುನಾವಣೆ ಫಲಿತಾಂಶ ಏನೇ ಆಗಲಿ, ಬಿಎಸ್ ವೈ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ: ಜೆಡಿಎಸ್ ವರಿಷ್ಠ ದೇವೇಗೌಡ

Srinivas Rao BV

ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದ ಬಳಿಕ ಬಿಜೆಪ-ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿದ್ಯಾ? ಹೀಗೊಂದು ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. 

ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಎಸ್ ಯಡಿಯೂರಪ್ಪ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಹ ಬಿಜೆಪಿ ಸರ್ಕಾರ ಬೀಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

ನ.05 ರಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಚ್ ಡಿ ದೇವೇಗೌಡರ, ಬಿಜೆಪಿ ಜೊತೆ ಜೆಡಿಎಸ್ ಇದ್ದೇ ಇರುತ್ತದೆ. ನಿಮ್ಮ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ. 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಏನೇ ಬಂದರೂ ಸಹ ಬಿಜೆಪಿ ಸರ್ಕಾರದ ಜೊತೆ ಜೆಡಿಎಸ್ ಇರಲಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆಯೂ ಮಾತನಾಡಿರುವ ಮಾಜಿ ಪ್ರಧಾನಿಗಳು, ಹೆಚ್ ಡಿ ಕೆ ಸರ್ಕಾರ ಪತನವಾಗಲು ಸಿದ್ದರಾಮಯ್ಯ ಕಾರಣ, ಸರ್ಕಾರ ಪತನವಾದ ಬಳಿಕ ಒಂದೊಂದೇ ಅಂಶಗಳು ಹೊರಬರುತ್ತಿವೆ ಎಂದು ಹೇಳಿದ್ದಾರೆ. 

15 ಕ್ಷೇತ್ರಗಳಲ್ಲಿ ಒಳಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ದೇವೇಗೌಡ, ಒಳ ಒಪ್ಪಂದದ ನಡೆಯುವುದು ಬೇರೆ ಪ್ರಶ್ನೆ, ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT