ನವದೆಹಲಿ: ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ, ಯುವ ನೇತಾರ ಜ್ಯೋತಿರಾಧಿತ್ಯ ಸಿಂಧ್ಯಾ, ತಮ್ಮ ಟ್ವಿಟರ್ ಪ್ರೊಫೈಲ್ನಲ್ಲಿ ಕಾಂಗ್ರೆಸ್ ಪಕ್ಷದ ಹೆಸರನ್ನೇ ತೆಗೆದುಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆ ಮತ್ತೊಂದು ಆಘಾತ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.
ತಮ್ಮ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ಕಾಂಗ್ರೆಸ್ ಪಕ್ಷದ ಹೆಸರನ್ನು ತೆಗೆದು ಹಾಕಿರುವ ಸಿಂಧ್ಯಾ, ತಾವು ಸಾರ್ವಜನಿಕ ಸೇವಕ ಹಾಗೂ ಕ್ರಿಕೆಟ್ ಉತ್ಸಾಹಿ ಎಂದಷ್ಟೇ ಬರೆದುಕೊಂಡಿದ್ದಾರೆ.ಈ ಬಗ್ಗೆ ಜ್ಯೋತಿರಾಧಿತ್ಯ ಸಿಂಧ್ಯಾ ಸ್ಪಷ್ಟನೆ ಕೂಡ ನೀಡಿದ್ದಾರೆ.
ತಿಂಗಳ ಹಿಂದೆಯೇ ತಾವು ತಮ್ಮ ಟ್ವಿಟ್ಟರ್ ಬಯೋ ಬದಲಾವಣೆ ಮಾಡಿದ್ದು,. ಸ್ನೇಹಿತರ ಸಲಹೆಯಂತೆ ತಾವು ತಮ್ಮ ಬಯೋ ಸಣ್ಣದಾಗಿ ಬರೆದುಕೊಂಡಿದ್ದು, ವದಂತಿಗಳೆಲ್ಲಾ ಆಧಾರರಹಿತ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿಗೆ ಆಪ್ತವಾಗಿರುವ ಎಲ್ಲ ಯುವಕರನ್ನು ಪಕ್ಷದಿಂದ ದೂರ ಇಡುತ್ತಿದ್ದಾರೆ ಅನ್ನೋ ಆರೋಪವೂ ಇದೆ. ಹರ್ಯಾಣ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅಶೋಕ್ ತನ್ವರ್ ಕೂಡಾ ಇದೇ ಕಾರಣಕ್ಕೆ ಕಾಂಗ್ರೆಸ್ ತೊರೆದಿದ್ದರು.
ಗ್ವಾಲಿಯಾರ್ನ ರಾಜಮನೆತನಕ್ಕೆ ಸೇರಿದ ಜ್ಯೋತಿರಾಧಿತ್ಯ ಸಿಂಧ್ಯಾ, ಈ ಹಿಂದೆ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತಾವೂ ಕೂಡಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.