ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ವಿವಾದ ಸೃಷ್ಟಿಸಿರುವ ನಾಮ್ ತಮಿಳರ್ ಕಚ್ಚಿ(ಎನ್ ಟಿಕೆ) ಸಂಸ್ಥಾಪಕ ಸೀಮನ್ ಅವರ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಲಾಗಿದೆ.
ನಟ ಹಾಗೂ ರಾಜಕಾರಣಿ ಸೀಮನ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತಮಿಳುನಾಡು ಕಾಂಗ್ರೆಸ್ ನಾಯಕರು, ಮಾಜಿ ಪ್ರಧಾನಿ ಹತ್ಯೆಯನ್ನು ಸಮರ್ಥಿಸಿಕೊಂಡ ಎನ್ ಟಿಕೆ ನಾಯಕನ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಕ್ರವಂಡಿ ಉಪ ಚುನಾವಣೆ ಪ್ರಚಾರದ ವೇಳೆ, ಮೇ 21, 1991ರಲ್ಲಿ ಎಲ್ ಟಿಟಿಇ ಆತ್ಮಾಹುತಿ ಬಾಂಬರ್ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಕ್ರಮವನ್ನು ಸೀಮನ್ ಸಮರ್ಥಿಸಿಕೊಂಡಿದ್ದರು.
ಈ ಸಂಬಂಧ ಸ್ಥಳೀಯ ಕಾಂಗ್ರೆಸ್ ಮುಖಂಡರು ನೀಡಿದ ದೂರಿನ ಆಧಾರದ ಮೇಲೆ ಸೀಮನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವಿಕ್ರವಂಡಿ ಪೊಲೀಸರು ತಿಳಿಸಿದ್ದಾರೆ.