ದೇಶ

ಜೆಜೆಪಿ ಬೆಂಬಲ: ಹರ್ಯಾಣದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಹಕ್ಕು ಮಂಡನೆ; 27 ಕ್ಕೆ ಖಟ್ಟರ್ ಸಿಎಂ ಪದಗ್ರಹಣ  

Srinivas Rao BV

ಚಂಡೀಗಢ: ಮನೋಹರ್ ಲಾಲ್ ಖಟ್ಟರ್ ಅವರು ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶನಿವಾರ ಆಯ್ಕೆಯಾಗಿದ್ದು, ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ಬೆಂಬಲದ ಮೂಲಕ ಸರ್ಕಾರ ರಚನೆ ಹಕ್ಕನ್ನು ಬಿಜೆಪಿ ಮಂಡಿಸಿದೆ. 

ಪಕ್ಷದ ಮೂಲಗಳ ಮಾಹಿತಿಯನ್ನು ಪಡೆದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿರುವ ವರದಿಯ ಪ್ರಕಾರ ಬಿಜೆಪಿ ನಾಯಕ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಮನೋಹರ್ ಲಾಲ್ ಖಟ್ಟರ್, ರಾಜ್ಯಾಧ್ಯಕ್ಷ ಸುಭಾಶ್ ಬರಾಲ ಅವರು ಹರ್ಯಾಣ ಗೌರ್ನರ್ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. 

ಅ.27 ರಂದು ಮಧ್ಯಾಹ್ನ 2.15 ಕ್ಕೆ  ಮನೋಹರ್ ಲಾಲ್ ಖಟ್ಟರ್ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ಜೆಜೆಪಿ ನಾಯಕ ಚೌಟಾಲ ರಾಜ್ಯಪಾಲರನ್ನು ಭೇಟಿ ಮಾಡಿದ್ದು ಖಟ್ಟರ್ ನೇತೃತ್ವದ ಸರ್ಕಾರ ಬೆಂಬಲ ನೀಡುತ್ತಿರುವುದರ ಬಗ್ಗೆ ಪತ್ರ ನೀಡಿದ್ದಾರೆ. 

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಅರುಣ್ ಸಿಂಗ್ ಹರ್ಯಾಣದ ವೀಕ್ಷಕರಾಗಿ ತೆರಳಿದ್ದರು. ಇನ್ನು ಕೆಲವು ಪಕ್ಷೇತರರೂ ಸಹ ಖಟ್ಟರ್ ಸರ್ಕಾರಕ್ಕೆ ಬೇಷರತ್ ಬೆಂಬಲ ನೀಡಿದ್ದು, ಅವರೂ ರಾಜ್ಯಪಾಲರ ಭೇಟಿ ವೇಳೆ ಬಿಜೆಪಿ ನಾಯಕರ ಜೊತೆಗಿದ್ದರು. 

ಖಟ್ಟರ್ ಅವರು ಹರಿಯಾಣ ರಾಜ್ಯದ ಶಾಸಕಾಂಗ ಪಕ್ಷದ ನಾಯಕರು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಘೋಷಣೆ ಮಾಡಿದ್ದಾರೆ. 

SCROLL FOR NEXT