ದೇಶ

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಗೋ ಮೂತ್ರ ಸೇವಿಸುತ್ತಿದ್ದರು- ಅಶ್ವಿನಿ ಚೌಬೆ 

Nagaraja AB

ಪಾಟ್ನಾ: ಔಷಧಕ್ಕಾಗಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಗೋ ಮೂತ್ರವನ್ನು ಸೇವಿಸುತ್ತಿದ್ದರು ಎಂದು  
ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಇಂದು  ಹೇಳಿದ್ದಾರೆ.

ಕ್ಯಾನ್ಸರ್ ರೋಗ ಗುಣಪಡಿಸಬಲ್ಲಂತಹ  ಔಷಧ ತಯಾರಿಕೆಗಾಗಿ ಗೋ ಮೂತ್ರವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯ ಗಂಭೀರವಾಗಿ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗೋ ಮೂತ್ರ ಶಕ್ತಿಯುತವಾದದ್ದು. ಇದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಕ್ಯಾನ್ಸರ್ ಚಿಕಿತ್ಸೆಗಾಗಿ ಔಷಧ ತಯಾರಿಕೆಗಾಗಿ ಗೋ ಮೂತ್ರವನ್ನು ಬಳಸಿಕೊಳ್ಳಲು ಆಯುಷ್ ಇಲಾಖೆ ಕಾರ್ಯೋನ್ಮುಖವಾಗಿರುವುದಾಗಿ ತಿಳಿಸಿದರು.

ಜನರು ತಮ್ಮಗೆ ಬಂದಿರುವ ರೋಗಗಳನ್ನು ವಾಸಿ ಮಾಡಿಕೊಳ್ಳಲು ತಮ್ಮ ಮೂತ್ರವನ್ನು ಸೇವಿಸಿರುವುದನ್ನು ನಾವು ನೋಡಿದ್ದೇವೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಕೂಡಾ ಗೋ ಮೂತ್ರವನ್ನು ಸೇವಿಸುತ್ತಿದ್ದರು. ಗೋ ಮೂತ್ರದ ಬಗ್ಗೆ ಸಂಶೋಧನೆಯ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.

ಡಯಬಿಟಿಸ್ , ಕ್ಯಾನ್ಸರ್ ನಂತಹ ರೋಗಗಳು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ಗೋವುಗಳ ರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇಂತಹ ರೋಗಗಳು ಜಗತ್ತಿನಾದ್ಯಂತ ಸವಾಲು ಆಗಿದೆ. ಇವುಗಳನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸುವುದಾಗಿ ಹೇಳುವುದಿಲ್ಲ ಆದರೆ, ಇವುಗಳನ್ನು ನಿಯಂತ್ರಿಸುತ್ತೇವೆ. 2030 ರೊಳಗೆ ಭಾರತ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಮುಟ್ಟಲಿದೆ ಎಂದು ಅಶ್ವಿನಿ ಕುಮಾರ್ ಚೌಬೆ ಹೇಳಿದರು. 

SCROLL FOR NEXT