ನಾಗಪುರ: ಕೊನೆಯ ಕ್ಷಣದಲ್ಲಿ ತನ್ನ ಪಥ ಬದಲಿಸಿದ ಚಂದ್ರಯಾನ -2 ಯೋಜನೆಯ ಲ್ಯಾಂಡರ್ ಭೂಮಿಯೊಂದಿಗೆ ಸಂಪರ್ಕ ಕಳೆದುಕೊಳ್ಳಲು ಇತ್ತೀಚಿನ ದಿನಗಳಲ್ಲಿ ಏಕಾಏಕಿ ಹೆಚ್ಚಿರುವ ಸಂಚಾರಿ ದಂಡದ ಮೊತ್ತ ಕಾರಣವಿರಬಹುದೇ?
ಇಂತಹದೊಂದು ವಿಡಂಬನಾತ್ಮಕ ಸಂಶಯ ಮೂಡಿದ್ದು ನಾಗಪುರ ಪೊಲೀಸರಿಗೆ.
ಲ್ಯಾಂಡರ್ ಸಂಪರ್ಕ ಕಳೆದುಕೊಂಡ ನಂತರ ದೇಶ ವಿದೇಶಗಳ ಜನರು ತಮ್ಮ ದುಃಖ, ನಿರಾಸೆ, ನೋವು, ಆಶಾಭಾವನೆ, ನಿರೀಕ್ಷೆ ಹಾಗೂ ಪ್ರೋತ್ಸಾಹ ಮಾತುಗಳನ್ನಾಡುತ್ತಿದ್ದರೆ, ನಾಗಪುರ ಪೊಲೀಸರು ವಿಭಿನ್ನವಾಗಿ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರದ ನಾಗಪುರ ಪೊಲೀಸರು ವಿಕ್ರಂ ಲ್ಯಾಂಡರ್ ಗೆ ಸಂಪರ್ಕಕ್ಕೆ ಬರುವಂತೆ ಟ್ವೀಟ್ ಮಾಡಿದ್ದು, ಸಿಗ್ನಲ್ ಗಳನ್ನು ಉಲ್ಲಂಘಿಸಿರುವುದಕ್ಕೆ ದಂಡದ ಚಲನ್ ನೀಡುವುದಿಲ್ಲ ಎಂದು ಹಾಸ್ಯಮಯವಾಗಿ ನುಡಿದ್ದಾರೆ.
'ಪ್ರೀತಿಯ ವಿಕ್ರಂ, ದಯವಿಟ್ಟು ಪ್ರತಿಕ್ರಿಯಿಸು. ನೀನು ಸಿಗ್ನಲ್ ಗಳನ್ನು ಉಲ್ಲಂಘಿಸಿರುವುದಕ್ಕೆ ನಾವು ದಂಡದ ಚಲನ್ ನೀಡುವುದಿಲ್ಲ' ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ದೇಶಾದ್ಯಂತ ಪೊಲೀಸರು ಎಲ್ಲೆಂದರಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಹಿಡಿದು, ಅವರಿಗೆ ಭಾರಿ ದಂಡದ ಚಲನ್ ನೀಡುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿರುವ ಸಂದರ್ಭದಲ್ಲಿ ಈ ಟ್ವೀಟ್ ಮಹತ್ವ ಪಡೆದುಕೊಂಡಿದೆ.
ಶನಿವಾರ ಮುಂಜಾನೆ 1.52ರ ಸುಮಾರಿಗೆ ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿಮೀ ದೂರವಿದ್ದ ಲ್ಯಾಂಡರ್ ತನ್ನ ಪಥ ಬದಲಿಸಿ, ಭೂಮಿಯೊಂದಿಗೆ ಸಂಪರ್ಕ ಕಡಿದುಕೊಂಡಿತ್ತು. ಇದರಿಂದ ಬೇಸರಗೊಂಡ ಇಸ್ರೋ ವಿಜ್ಞಾನಿಗಳಿಗೆ ದೇಶದ ಜನರು ಒಕ್ಕೊರಲಿನಿಂದ ಬೆಂಬಲ ನೀಡಿದ್ದರು.
ಆದರೆ, ಭಾನುವಾರ, ಇಸ್ರೋ ಮುಖ್ಯಸ್ಥ ಕೆ.ಶಿವನ್, ಚಂದ್ರಯಾನ -2 ನ ಆರ್ಬಿಟರ್, ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇರುವುದನ್ನು ಪತ್ತೆಹಚ್ಚಿದೆ ಎಂದು ಟ್ವೀಟ್ ಮಾಡಿದ್ದರು.