ದೇಶ

ಮೂಲಸೌಕರ್ಯ ಮೇಲ್ದರ್ಜೇಗೇರಿಸಲು 100 ಲಕ್ಷ ಕೋಟಿ ರೂ. ವೆಚ್ಚ: ನಿರ್ಮಲಾ ಸೀತಾರಾಮನ್

Nagaraja AB

ಚೆನ್ನೈ: ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿಯಾದ ನಂತರ ಕಳೆದ 100 ದಿನಗಳಲ್ಲಿ ಹಲವು ಮಹತ್ವಪೂರ್ಣ ಕ್ರಮಗಳನ್ನು ಕೈಗೊಂಡಿರುವುದಾಗಿ  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಜಾಗತಿಕ ಹಾಗೂ ದೇಶಿಯ ಆರ್ಥಿಕ ಕುಸಿತದ ನಡುವೆಯೂ ಮುಂದಿನ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆ ಐದು ಟ್ರಿಲಿಯನ್ ನಷ್ಟಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಮಾರು 100 ಲಕ್ಷ ಕೋಟಿ ರೂ. ವೆಚ್ಚದೊಂದಿಗೆ ದೇಶಾದ್ಯಂತ ಮೂಲಸೌಕರ್ಯ ಮೇಲ್ದರ್ಜೇಗೇರಿಸಲು ಯೋಜನೆಗಳನ್ನು ಗುರುತಿಸುವಂತೆ ಉನ್ನತ ಮಟ್ಟದ ಕಾರ್ಯಪಡೆಯನ್ನು ನೇಮಕ ಮಾಡಲಾಗಿದೆ. ತಲಾ 100 ಕೋಟಿ ರೂ. ವೆಚ್ಚದ  ಗ್ರೀನ್ ಪೀಲ್ಡ್ ಮತ್ತು ಬ್ರೌನ್ ಪೀಲ್ಡ್ ಯೋಜನೆಗಳು ಕೂಡಾ ಇದರಲ್ಲಿ ಸೇರಿವೆ ಎಂದು ಅವರು ಹೇಳಿದರು.

ಕ್ಷೀಪ್ರಗತಿಯಲ್ಲಿ ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಯಾಗಬೇಕಾಗಿದೆ.ಇದರಿಂದಾಗಿ ಮಿಲಿಯನ್ ಗಟ್ಟಲೇ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. 10 ಸಾರ್ವಜನಿಕ ಬ್ಯಾಂಕುಗಳನ್ನು ವಿಲೀನಗೊಳಿಸುವುದರಿಂದ ಆರ್ಥಿಕ ಪ್ರಗತಿಯಾಗಲಿದೆ.ಬ್ಯಾಂಕ್ ಗಳಿಗೂ ಲಾಭವಾಗಲಿದೆ. ಆರ್ಥಿಕ ಪ್ರಗತಿಗೆ ಉತ್ತಮ ಬ್ಯಾಂಕುಗಳ ಅಗತ್ಯವಿದೆ. ನಿರ್ದೇಶಕರುಗಳ ಮಂಡಳಿ ಬ್ಯಾಂಕುಗಳ ವಿಲೀನಗೊಳಿಸುವ ದಿನವನ್ನು ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಆಟೋ ಮೊಬೈಲ್ ಕ್ಷೇತ್ರದಲ್ಲಿ ಮಾರಾಟ ಇಳಿಕೆ ಹಾಗೂ ಉದ್ಯೋಗ ಕುಂಠಿತ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹೊಸ ವಾಹನಗಳನ್ನು ಖರೀದಿಸಲು ಸರ್ಕಾರಿ ಇಲಾಖೆಗೆ ಅವಕಾಶ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. 

ಬೃಹತ್ ಆಟೋಮೊಬೈಲ್ ಉತ್ಪಾದನೆ ಮೇಲಿನ ಜಿಎಸ್ ಟಿ ದರವನ್ನು ಶೇ. 28 ರಿಂದ 18ಕ್ಕೆ ಇಳಿಸಬೇಕೆಂದು ಸಂಬಂಧಿತ  ಕ್ಷೇತ್ರಗಳ ಪ್ರತಿನಿಧಿಗಳು ಸೀತಾರಾಮನ್ ಅವರನ್ನು ಒತ್ತಾಯಿಸಿದರು.  ಜಿಎಸ್ ಟಿ ದರ ಇಳಿಕೆ ನಿರ್ಧಾರವನ್ನು ತಾವೊಬ್ಬರೇ ಕೈಗೊಳ್ಳಲು ಸಾಧ್ಯವಿಲ್ಲ. ಸಲಹೆಗಳನ್ನು ಪರಿಗಣಿಸಲಾಗುವುದು, ಈ ಸಂಬಂಧ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

SCROLL FOR NEXT