ದೇಶ

ರಾಜಸ್ಥಾನದಲ್ಲಿ ಪಕ್ಷಾಂತರ ಪರ್ವ: ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲ ಎಂಬುದು ಮತ್ತೆ ಸಾಬೀತು - ಮಾಯಾವತಿ

Lingaraj Badiger

ಲಖನೌ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜಸ್ಥಾನದ ಎಲ್ಲಾ ಆರು ಬಿಎಸ್​ಪಿ ಶಾಸಕರೂ ಆಡಳಿತರೂಢ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ, ಕಾಂಗ್ರೆಸ್, ಬಿಎಸ್​ಪಿ ಶಾಸಕರನ್ನು ಖರೀದಿಸುವ ಮೂಲಕ ನಂಬಿಕೆಗೆ ಅರ್ಹವಲ್ಲದ ಪಕ್ಷ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಎಸ್​ಪಿ ತನ್ನ ಬೇಷರತ್ತಾದ ಬೆಂಬಲವನ್ನು ನೀಡಿದ್ದರೂ ಸಹ ಇದು ನಂಬಿಕೆ ದ್ರೋಹ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ತನ್ನ ಎದುರಾಳಿ ಬಿಜೆಪಿ ವಿರುದ್ಧ ಹೋರಾಡುವುದನ್ನು ಬಿಟ್ಟು, ತನಗೆ ಬೆಂಬಲವಾಗಿ ನಿಂತಿರುವ ಪಕ್ಷಗಳಿಗೇ ಹಾನಿ ಮಾಡುತ್ತಿದೆ. ಇದರಿಂದ ಕಾಂಗ್ರೆಸ್ ದಲಿತರ, ಪರಿಶಿಷ್ಟ ವರ್ಗಗಳ ಹಾಗೂ ಹಿಂದುಳಿದ ವರ್ಗದವರ ವಿರುದ್ಧವಿರುವುದು ಹಾಗೂ ಹಿಂದುಳಿದವರ ಹಕ್ಕಿನ ಬಗ್ಗೆ ಅದಕ್ಕಿರುವ ನಿರ್ಲಕ್ಷ್ಯತೆ ಗೊತ್ತಾಗುತ್ತದೆ ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಗಳಿಗೆ ವಿರುದ್ಧವಾಗಿದೆ. ಇದೇ ಕಾರಣಕ್ಕೆ ಅಂಬೇಡ್ಕರ್ ಅವರು ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದೂ ಮಾಯಾವತಿ ದೂರಿದ್ದಾರೆ.

ಸೋಮವಾರ ತಡರಾತ್ರಿ ಬಹುಜನ ಸಮಾಜ ಪಕ್ಷದ ಎಲ್ಲಾ ಆರು ಶಾಸಕರಾದ ಸಂದೀಪ್ ಕುಮಾರ್, ರಾಜೇಂದ್ರ ಗುಧಾ, ದೀಪ್ ಚಂದ್, ಲಖನ್ ಸಿಂಗ್, ವಾಜಿಬ್ ಅಲಿ, ಮತ್ತು ಜೋಗಿಂದರ್ ಸಿಂಗ್ ಅವನಾ ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಮಾಯಾವತಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT