ದೇಶ

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಇಮ್ರಾನ್ ಕಾಶ್ಮೀರ ಹೇಳಿಕೆಗೆ ತಿರುಗೇಟು: ಮೋದಿ ಬೆನ್ನಿಗೆ ನಿಂತ ಕಾಂಗ್ರೆಸ್

Manjula VN

ನವದೆಹಲಿ: ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಚಾರ ಕುರಿತು ನೀಡಿದ್ದ ಹೇಳಿಕೆಗೆ ತೀವ್ರವಾಗಿಯೇ ತಿರುಗೇಟು ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಭಾನುವಾರ ಬೆಂಬಲ ನೀಡಿದೆ. 

ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಮಾತನಾಡಿ, ಕಾಶ್ಮೀರ ಕುರಿತ ಇಮ್ರಾನ್ ನೀಡಿದ್ದ ಹೇಳಿಕೆಗೆ ಪ್ರಧಾನಿ ಮೋದಿ ಸರ್ಕಾರ ತಿರುಗೇಟು ನೀಡಿದ್ದು, ಇದಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸುತ್ತದೆ. ಆದರೆ, ಇಮ್ರಾನ್ ಖಾನ್ ಅವರ ಭಾಷಣವನ್ನು ಬಿಜೆಪಿ ನಾಯಕರೇಕೆ ಪ್ರಚಾರ ಮಾಡುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. 

ಈ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡುವುದಕ್ಕೂ ಮುನ್ನ ಅಮೆರಿಕಾ ಪ್ರವಾಸದ ಕುರಿತು ಮೊದಲು ದೇಶವನ್ನುದ್ದೇಶಿಸಿ ಮಾತನಾಡಲಿ ಎಂದು ತಿಳಿಸಿದ್ದಾರೆ. 

74ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಹಾಧಿವೇಶನ (ಯುಎನ್'ಜಿಎ)ಯಲ್ಲಿ 50 ನಿಮಿಷಗಳ ಸುದೀರ್ಘವಾಗಿ ಮಾತನಾಡಿದ್ದ ಇಮ್ರಾನ್ ಖಾನ್ ಅವರು, ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು. ಕಾಶ್ಮೀರ ವಿಚಾರವಾಗಿ ಉಭಯ ದೇಶಗಳ ನಡುವಿನ ಶೀಥಲ ಸಮರ ದಿನೇ ದಿನೇ ತಾರಕಕ್ಕೇರುತ್ತಿದೆ. ಕಾಶ್ಮೀರದಲ್ಲಿ ಭಾರತ ಅಮಾನವೀಯ ಕರ್ಫೂ ಹೇರಿದೆ. ಕರ್ಫ್ಯೂ ತೆಗೆದರೆ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಯಲಿದೆ. ಅಣ್ವಸ್ತ್ರಗಳನ್ನು ಹೊಂದಿರುವ ಭಾರತ–ಪಾಕಿಸ್ತಾನ ನಡುವೆ ಯುದ್ಧ ನಡೆದರೆ ಅದರ ಪರಿಣಾಮ ಇತರ ದೇಶಗಳ ಮೇಲೂ ಆಗಲಿದೆ ಎಂದು ಎಚ್ಚರಿಸಿದ್ದರು. 

ತಮ್ಮ 50 ನಿಮಿಷಗಳ ಭಾಷಣದಲ್ಲಿ ಇಮ್ರಾನ್ 70 ಬಾರಿ ಇಸ್ಲಾಂ, 21 ಬಾರಿ ಕಾಶ್ಮೀರ, 16 ಬಾರಿ ಭಾರತ, 12 ಬಾರಿ ಮೋದಿ, 10 ಆರ್'ಎಸ್ಎಸ್, 5 ಬಾರಿ ಹಿಂದೂ ವಿಚಾರಗಳನ್ನು ಪ್ರಸ್ತಾಪಿಸಿ ನೈಜ ಜಾಗತಿಕ ವಿಚಾರಗಳಿಂದಲೇ ದೂರ ಸರಿದಿದ್ದರು. ಆದರೆ, ಮೋದಿಯವರು ಇದಕ್ಕೆ ತದ್ವಿರುದ್ಧವಾಗಿ ತಿರುಗೇಟಿನ ಜೊತೆ ಜೊತೆಗೆ ಹವಾಮಾನ ವೈಪರೀತ್ಯ, ವಿಶ್ವ ಆರೋಗ್ಯ ಸಂಸ್ಥೆ, ಶೌಚಾಲಯ, ಸ್ವಚ್ಛತೆ ಹೀಗೆ ಜಾಗತಿಕ ವಿಚಾರಗಳ ಬಗ್ಗೆ ಮಾತನಾಡುವ ಮೂಲಕ ಪ್ರಬುದ್ಧತೆಯನ್ನು ಮೆರೆದಿದ್ದರು. 

SCROLL FOR NEXT