ದೇಶ

ವೈದ್ಯರಿಂದ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ: ಕೇರಳ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

Lingaraj Badiger

ತಿರುವನಂತಪುರ: ವೈದ್ಯರಿಂದ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದ ಕೇರಳ ಸರ್ಕಾರದ ಆದೇಶದಕ್ಕೆ ಕೇರಳ ಹೈಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದ್ದು, ಪಾನ ಪ್ರಿಯರಿಗೆ ತೀವ್ರ ನಿರಾಶೆಯಾಗಿದೆ.

ಒಂದು ಕಡೆ ಕೊರೋನಾ ವೈರಾಣು ದಿನದಿಂದ ದಿನಕ್ಕೆ ದೇಶಾದ್ಯಂತ ಹರಡುತ್ತಿದ್ದರೆ.... ಮತ್ತೊಂದು ಕಡೆ ಮದ್ಯ ವ್ಯಸನಿಗಳು ಮದ್ಯಪಾನಕ್ಕಾಗಿ ಹಾಹಾಕಾರ ಸೃಷ್ಟಿಸುತ್ತಿದ್ದಾರೆ. ಮದ್ಯ ಸಿಗದೆ ಪಾನ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಹಿನ್ನಲೆಯಲ್ಲಿ ಮದ್ಯ ವ್ಯಸನಿಗಳ ಆರ್ತನಾದಕ್ಕೆ ಮರುಗಿದ್ದ ಕೇರಳ ಸರ್ಕಾರ, ಮದ್ಯ ಅಗತ್ಯವಿರುವವರು ವೈದ್ಯರ ಬಳಿಯಿಂದ ಔಷಧ ಚೀಟಿ(ಪ್ರಿಸ್ಕ್ರಿಪ್ಷನ್) ತಂದವರಿಗೆ ಮಾತ್ರ ಮದ್ಯ ಮಾರಾಟ ಮಾಡುವಂತೆ ಆದೇಶಿಸಿತ್ತು. 

ರಾಜ್ಯ ಸರ್ಕಾರದ ಈ ಆದೇಶ ಪ್ರಶ್ನಿಸಿ ಸಂಸದ ಟಿಎನ್ ಪ್ರತಾಪನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಮದ್ಯ ನೀಡುವ ಸರ್ಕಾರದ ಆದೇಶಕ್ಕೆ ಮೂರು ವಾರಗಳ ಕಾಲ ತಡೆಯಾಜ್ಞೆ ವಿಧಿಸಿದೆ.

ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿರುವ ಕಾರಣ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಆದರೆ, ಕೇರಳದಲ್ಲಿ ಸೇವಿಸಲು ಮದ್ಯ ದೊರಕದ ಕಾರಣ ಒಂಬತ್ತು ಮಂದಿ ಆಲ್ಕೋಹಾಲ್ ಪ್ರೇಮಿಗಳು ಸಾವನ್ನಪ್ಪಿದ್ದಾರೆ. ಇವರಲ್ಲಿ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

ಈ ಹಿನ್ನಲೆಯಲ್ಲಿ ಅಬಕಾರಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವೈದ್ಯರಿಂದ ಔಷಧ ಚೀಟಿ (ಪ್ರಿಸ್ಕ್ರಿಪ್ಷನ್) ತಂದವರಿಗೆ ಮಾತ್ರ ಮದ್ಯ ಮಾರಾಟ ಮಾಡಲು ಮುಂದಾಗಿದ್ದರು.

SCROLL FOR NEXT