ದೇಶ

ಕೊವಿಡ್-19 ಎದುರಿಸಲು ಹಣಕಾಸು ನೆರವು ನೀಡಿ: ಕೇಂದ್ರಕ್ಕೆ ನಾಲ್ವರು ಕಾಂಗ್ರೆಸ್ ಮುಖ್ಯಮಂತ್ರಿಗಳ ಒತ್ತಾಯ

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಎದುರಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಾಕಷ್ಟು ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ನಾಲ್ವರು ಕಾಂಗ್ರೆಸ್ ಮುಖ್ಯಮಂತ್ರಿಗಳು ಗುರುವಾರ ಆರೋಪಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹಾಗೂ ಪುದುಚೇರಿ ಸಿಎಂ ವಿ ನಾರಾಯಣಸ್ವಾಮಿ ಅವರು ಇಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.

ನಾವು ಕ್ಷಿಪ್ರ ಪರೀಕ್ಷೆಗೆ ಒತ್ತು ನೀಡಿದ್ದೇವೆ. ಆದರೆ ದುರದೃಷ್ಟವಶಾತ್ ಕೊವಿಡ್-19 ಪರೀಕ್ಷಾ ಕಿಟ್‌ಗಳು ವಿಫಲವಾಗಿವೆ ... ಕಿಟ್‌ಗಳು, ವೆಂಟಿಲೇಟರ್‌ಗಳು ಇತ್ಯಾದಿಗಳನ್ನು ಕೇಂದ್ರೀಕೃತವಾಗಿ ಖರೀದಿಸುವ ತುರ್ತು ಅವಶ್ಯಕತೆಯಿದೆ. ಇದರಿಂದ ಲಭ್ಯತೆ, ಗುಣಮಟ್ಟ ಮತ್ತು ಪ್ರಮಾಣವನ್ನು ಖಚಿತಪಡಿಸಿಕೊಳ್ಳಬಹುದ ಎಂದಿದ್ದಾರೆ.

ರಾಜ್ಯಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರ ಸರ್ಕಾರ ಮುಂದೆ ಬರದಿದ್ದರೆ, ಕೊವಿಡ್-19 ವಿರುದ್ಧದ ಹೋರಾಟವು ದುರ್ಬಲಗೊಳ್ಳುತ್ತದೆ. ರಾಜ್ಯಗಳಿಗೆ ದೊಡ್ಡ ಹಣಕಾಸಿನ ಪ್ಯಾಕೇಜ್ ಇಲ್ಲದಿದ್ದರೆ, ಲಾಕ್‌ಡೌನ್ ನಂತರ ರಾಜ್ಯಗಳು ಸಾಮಾನ್ಯ ಸ್ಥಿತಿಗೆ ಹೇಗೆ ಮರಳುತ್ತದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣಕಾಸಿನ ನೆರವು ನೀಡದಿದ್ದರೆ ಕೊವಿಡ್-19 ವಿರುದ್ಧ ಹೋರಾಟ ಗೆಲ್ಲುವುದು ಹೇಗೆ ಎಂದಿರುವ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಕೇಂದ್ರ ಕೂಡಲೇ ರಾಜ್ಯಗಳಿಗೆ ಹಣಕಾಸಿನ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

SCROLL FOR NEXT