ದೇಶ

ಅಯೋಧ್ಯೆ ಭೂಮಿಪೂಜೆ ಸಮಾರಂಭ: ವಿಡಿಯೋ ಕಾನ್ಫರೆನ್ಸ್ ಮೂಲಕ  ಎಲ್ ಕೆ ಅಡ್ವಾಣಿ, ಎಂಎಂ ಜೋಷಿ ಭಾಗಿ

Nagaraja AB

ನವದೆಹಲಿ: ಬಿಜೆಪಿಯ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಶಿ ರಾಮಮಂದಿರ ಭೂಮಿ ಪೂಜೆ ಸಮಾರಂಭಕ್ಕಾಗಿ ಅಯೋಧ್ಯೆಗೆ ತೆರಳುತ್ತಿಲ್ಲ.ಆದರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಆಗಸ್ಟ್  5 ರಂದು ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಉಭಯ ನಾಯಕರನ್ನು ದೂರವಾಣಿ ಮೂಲಕ ಶನಿವಾರ ಆಹ್ವಾನಿಸಲಾಗಿದೆ. ಸುಪ್ರೀಂಕೋರ್ಟ್ ನಿಂದ ಸ್ಥಾಪಿಸಲಾಗಿರುವ 
ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ಆಹ್ವಾನವನ್ನು ಕಳುಹಿಸಲಾಗಿದೆ. 

ಅಯೋಧ್ಯೆಯಲ್ಲಿ 1990ರಲ್ಲಿ ರಾಮ ಮಂದಿರ ನಿರ್ಮಾಣ ಆಂದೋಲನದ ಪ್ರಮುಖ ಪಾತ್ರ ವಹಿಸಿದ್ದ ಎಲ್ ಕೆ ಅಡ್ವಾಣಿ ಕಳೆದ ವಾರ ಲಖನೌನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಮಸೀದಿ ಧ್ವಂಸ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಈ ಪ್ರಕರಣದಲ್ಲಿ 92 ವರ್ಷದ ಅಡ್ವಾಣಿ ಕೂಡಾ ಆರೋಪಿಯಾಗಿದ್ದು, ಸುಮಾರು ನಾಲ್ಕೂವರೆ ಗಂಟೆಗಳ ಕಾಲ 100 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ. ಎಲ್ಲ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ಮಸೀದಿ ಧ್ವಂಸ ಸಂದರ್ಭದಲ್ಲಿ ಎಲ್ ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಿಬಿಐ ಹೇಳಿತು. ರಾಜಕೀಯ ಕಾರಣದಿಂದ ತಮ್ಮ 
ಮೇಲೆ ತಪ್ಪು ಆರೋಪಗಳನ್ನು ಹೊರಿಸಲಾಗಿದೆ ಎಂದು ಎಂ.ಎಂ. ಜೋಷಿ ಹಾಗೂ ಉಮಾ ಭಾರತಿ  ಅದೇ ನ್ಯಾಯಾಲಯದಲ್ಲಿ
ಹೇಳಿಕೆ ನೀಡಿದ್ದಾರೆ.

ಆಗಸ್ಟ್ 5 ರಂದು ನಡೆಯಲಿರುವ ಭೂಮಿ ಪೂಜೆ ಸಮಾರಂಭಕ್ಕಾಗಿ ಅದ್ದೂರಿ ಸಿದ್ಧತೆ ಮಾಡಲಾಗುತ್ತಿದೆ. ಶಂಕು ಸ್ಥಾಪನೆ ದಿನ 40 ಕೆಜಿ ಬೆಳ್ಳಿಯ ಇಟ್ಟಿಗೆಗಳನ್ನು ಇಡಲಾಗುತ್ತಿದ್ದು, ಕೊರೋನಾ ನಿರ್ಬಂಧದಿಂದಾಗಿ 50 ಮಂದಿ ಗಣ್ಯರನ್ನು ಆಹ್ವಾನಿಸಿರುವುದಾಗಿ ಟ್ರಸ್ಟ್ ತಿಳಿಸಿದೆ.

SCROLL FOR NEXT