ದೇಶ

ಭಾರತದ ನೂತನ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ಪ್ರಮಾಣ ವಚನ ಸ್ವೀಕಾರ

Srinivasamurthy VN

ನವದೆಹಲಿ: ಭಾರತದ ನೂತನ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ಅವರು ಶನಿವಾರ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ದೆಹಲಿಯ ರಾಜಭವನದ ಅಶೋಕ ಹಾಲ್ ನಲ್ಲಿ ರಾಷ್ಟ್ರಪತಿಗಳ ಎದುರು ಇಂದು ಬೆಳಗ್ಗೆ ಗಿರೀಶ್ ಚಂದ್ರ ಮುರ್ಮು ಅವರು ನೂತನ ಸಿಎಜಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ  ಬಳಿಕ ಮರ್ಮು ಅವರು ಸಿಎಜಿ ಕೇಂದ್ರ ಕಚೇರಿಯಲ್ಲಿ ಮಹಾತ್ಮಗಾಂಧಿ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ಮುರ್ಮು ಅವರು 2024ರ ನವೆಂಬರ್ 20ರವರೆಗೂ ಭಾರತದ ಸಿಎಜಿ ಆಗಿ ಮುಂದುವರೆಯಲಿದ್ದಾರೆ.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ಸಿಎಜಿ ಆಗಿ ನೇಮಕಗೊಳಿಸಿ ಕೇಂದ್ರ ಹಣಕಾಸು ಮತ್ತು ಆರ್ಥಿಕ ವ್ಯವಹಾರಗಳ ಸಚಿವಾಲಯವು ಆದೇಶ ಹೊರಡಿಸಿತ್ತು. ಬಳಿಕ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಗಿರೀಶ್ ಚಂದ್ರ ಮುರ್ಮು ರಾಜೀನಾಮೆ ಸಲ್ಲಿಸಿದ್ದರು. ಗುರುವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದರು. 

ಇದರ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕೆ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರನ್ನು ಆಯ್ಕೆ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಬೆಳಗ್ಗೆ ಆದೇಶ ಹೊರಡಿಸಿದ್ದರು. 

SCROLL FOR NEXT