ದೇಶ

ತಬ್ಲಿಘಿಯಲ್ಲಿ ಭಾಗವಹಿಸಿದ ವ್ಯಕ್ತಿ ಮೇಲೆ ಕೊಲೆ ಯತ್ನ ಆರೋಪ: ಅಧಿಕಾರ ದುರುಪಯೋಗ ಎಂದ ಅಲಹಾಬಾದ್ ಹೈಕೋರ್ಟ್

Sumana Upadhyaya

ಅಲಹಾಬಾದ್: ಕಳೆದ ಮಾರ್ಚ್ ನಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೌ ನಿವಾಸಿಯ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಿದ್ದು ಕಾನೂನಿನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಂತಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 307ರಡಿ(ಕೊಲೆಗೆ ಯತ್ನ) ವಿಚಾರಣೆ ನಡೆಸಿ ತೀರ್ಪಿಗೆ ತಡೆ ನೀಡುವ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ಥಳೀಯ ಮೊಹಮ್ಮದ್ ಸಾದ್ ಅವರು ತಬ್ಲಿಘಿ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ದೆಹಲಿಯಿಂದ ಬಂದ ನಂತರ ಸ್ವಯಂಪ್ರೇರಿತವಾಗಿ ಕ್ವಾರಂಟೈನ್ ಗೆ ಒಳಗಾಗಿಲ್ಲ ಎಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಹೀಗೆ ಹೇಳಿದೆ.

ಕೇಸಿಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯನ್ನು ಪ್ರಶ್ನಿಸಿ ಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಯ್ ಭನೊಟ್ ಈ ಆದೇಶ ನೀಡಿದ್ದಾರೆ. 

ಮಾರಣಾಂತಿಕ ಕಾಯಿಲೆ ಹರಡಿದ್ದಕ್ಕಾಗಿ ಈ ಹಿಂದೆ ಐಪಿಸಿಯ ಸೆಕ್ಷನ್ 269 ಮತ್ತು 270 ರ ಅಡಿಯಲ್ಲಿ ಸಾದ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು, ನಂತರ ಅದನ್ನು ಮರುಪಡೆದು 'ಕೊಲೆ ಯತ್ನ' ಗಾಗಿ ಐಪಿಸಿಯ ಸೆಕ್ಷನ್ 307 ರ ಅಡಿಯಲ್ಲಿ ಹೊಸ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಆಕ್ಷೇಪ ಸಲ್ಲಿಸಿದರು. 

ಡಿಸೆಂಬರ್ 15ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿ ಕೋರ್ಟ್ ಆದೇಶ ನೀಡಿತು.

SCROLL FOR NEXT