ದೇಶ

ನೂತನ ಸಂಸತ್ ಭವನ ನಿರ್ಮಾಣ 'ಆತ್ಮನಿರ್ಭರ್ ಭಾರತ್' ಸೃಷ್ಟಿಗೆ ಸಾಕ್ಷಿಯಾಗಲಿದೆ: ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಭಾರತದ ಇತಿಹಾಸದಲ್ಲಿ ಇಂದು ಮಹತ್ವಪೂರ್ಣ ಐತಿಹಾಸಿಕ ದಿನ, ನೂತನ ಸಂಸತ್ತು ಭವನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ದೇಶದ 130 ಕೋಟಿ ಭಾರತೀಯರೆಲ್ಲರೂ ಒಟ್ಟು ಸೇರಿ ಈ ನೂತನ ಸಂಸತ್ತು ಭವನ ನಿರ್ಮಾಣ ಮಾಡಲಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿಂದು ನೂತನ ಸಂಸತ್ತು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ, ಈ ಐತಿಹಾಸಿಕ ದಿನವನ್ನು ಇಂದು ಕಣ್ತುಂಬಿಕೊಳ್ಳುತ್ತಿರುವ ಈ ದೇಶದ 130 ಕೋಟಿ ಭಾರತೀಯರಿಗೆ ಇಂದು ಬಹಳ ಹೆಮ್ಮೆಯ ದಿನ ಎಂದರು.

ಹಳೆಯ ಮತ್ತು ಹೊಸದರ ಸಮ್ಮಿಲನ, ಪರಸ್ಪರ ಕೂಡುವಿಕೆಗೆ ನೂತನ ಸಂಸತ್ತು ಭವನ ಒಂದು ಉದಾಹರಣೆ. ಸಮಯ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಬದಲಾವಣೆಯ ಗುರುತು ಈ ಸಂಸತ್ತು ಭವನ ನಿರ್ಮಾಣವಾಗಿದೆ. ಹಳೆಯ ಸಂಸತ್ತು ಕಟ್ಟಡ ಸ್ವಾತಂತ್ರ್ಯ ನಂತರ ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು. ಹೊಸ ಭವನ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. ದೇಶದ ಅಗತ್ಯಗಳನ್ನು ಈಡೇರಿಸುವ ಕೆಲಸ ಹಳೆ ಕಟ್ಟಡದಲ್ಲಿ ಆಗಿದೆ. ಇನ್ನು ಹೊಸ ಕಟ್ಟಡದಲ್ಲಿ 21ನೇ ಶತಮಾನದಲ್ಲಿ ಭಾರತೀಯರ ಆಸೆ, ಆಕಾಂಕ್ಷೆಗಳು ಸಾಕಾರಗೊಳ್ಳಲಿದೆ ಎಂದರು.

ಪ್ರಜಾಪ್ರಭುತ್ವ ಭಾರತದ ಸಂಸ್ಕೃತಿ. ಪ್ರಜಾಪ್ರಭುತ್ವವೆಂದರೆ ಜೀವನದ ಮೌಲ್ಯ, ಜೀವನ ವಿಧಾನ ಮತ್ತು ದೇಶದ ನಾಗರಿಕರ ಜೀವನದ ಆತ್ಮವಾಗಿದೆ. ಶತಮಾನಗಳ ಅನುಭವದ ಆಧಾರದ ಮೇಲೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ನನ್ನ ಜೀವನದ ಅಮೂಲ್ಯ ಗಳಿಗೆ: 2014ರಲ್ಲಿ ನಾನು ಮೊದಲ ಬಾರಿಗೆ ಸಂಸದನಾಗಿ ದೆಹಲಿಯ ಸಂಸತ್ ಭವನಕ್ಕೆ ಕಾಲಿಟ್ಟ ಗಳಿಗೆಯನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ, ಅದು ಬಹಳ ಅದ್ಭುತ ಗಳಿಗೆಯಾಗಿತ್ತು. ಪ್ರಜಾಪ್ರಭುತ್ವದ ದೇವಸ್ಥಾನವಾದ ಸಂಸತ್ತು ಭವನಕ್ಕೆ ಕಾಲಿಡುವಾಗ ಶಿರ ಬಗ್ಗಿಸಿ ನಮಸ್ಕರಿಸಿ ಒಳಗೆ ಕಾಲಿಟ್ಟೆ ಎಂದು ಪ್ರಧಾನಿ ನೆನಪು ಮಾಡಿಕೊಂಡರು.

SCROLL FOR NEXT