ದೇಶ

ರೈತರ ಪ್ರತಿಭಟನೆ ಮೇಲೆ ನಿಯಂತ್ರಣ ಹೊಂದಲು ಎಡಪಂಥೀಯರು, ಮಾವೋವಾದಿಗಳ ಯತ್ನ: ಸರ್ಕಾರ

Sumana Upadhyaya

ನವದೆಹಲಿ: ತಮ್ಮ ಪ್ರತಿಭಟನಾ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಬಹುದಾದ ಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರಿಗೆ ಎಚ್ಚರಿಕೆ ನೀಡಿದೆ.

ಕೆಲವು ಸಮಾಜ ವಿರೋಧಿ ಮತ್ತು ಎಡಪಂಥೀಯರು, ಮಾವೋವಾದಿ ಶಕ್ತಿಗಳು ಪ್ರತಿಭಟನೆಯ ದಿಕ್ಕನ್ನು ಮತ್ತು ವಾತಾವರಣವನ್ನು ಹಾಳು ಮಾಡಲು ನೋಡುತ್ತಿದ್ದಾರೆ, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ರೈತ ಸಂಘಟನೆಗಳಿಗೆ ಹೇಳಿದೆ.

ದೆಹಲಿಯ ಟಿಕ್ರಿ ಗಡಿಭಾಗದಲ್ಲಿ ಕೆಲವು ಪ್ರತಿಭಟನಾಕಾರರು ಪೋಸ್ಟರ್ ಹಿಡಿದುಕೊಂಡು ಹಲವು ಆರೋಪಗಳ ಮೇಲೆ ಬಂಧಿತರಾಗಿರುವ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವ ಫೋಟೋಗಳು ಮಾಧ್ಯಮಗಳಲ್ಲಿ ಬಂದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ಇಂತಹ ಸಮಾಜ ವಿರೋಧಿ ಶಕ್ತಿಗಳು ರೈತರ ಪ್ರತಿಭಟನೆಯ ದಿಕ್ಕನ್ನು ಬದಲಿಸಿ ವಾತಾವರಣವನ್ನು ಹಾಳು ಮಾಡಲು ನೋಡುತ್ತಿವೆ. ರೈತರನ್ನು ತಮ್ಮ ನಿಲುವಿಗೆ ತಕ್ಕಂತೆ ಬಳಸಿಕೊಳ್ಳಲು ನೋಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ರೈತರ ಪರವಾಗಿದ್ದು ಅವರ ಜೊತೆ ಚರ್ಚಿಸಿ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲು ಸಿದ್ದವಿದೆ ಎಂದು ಹೇಳಿದ್ದಾರೆ. ರೈತರ ಆಕ್ಷೇಪಗಳನ್ನು, ಬೇಡಿಕೆಗಳನ್ನು ಬಗೆಹರಿಸಲು ಪ್ರಸ್ತಾವನೆಯನ್ನು ರೈತ ಸಂಘಟನೆಗಳಿಗೆ ಕಳುಹಿಸಲಾಗಿದ್ದು ಸರ್ಕಾರ ಇನ್ನು ಮುಂದೆಯೂ ಚರ್ಚೆ, ಮಾತುಕತೆಗೆ ಸಿದ್ದವಿದೆ ಎಂದು ನರೇಂದ್ರ ಸಿಂಗ್ ತೊಮರ್ ಟ್ವೀಟ್ ಮಾಡಿದ್ದಾರೆ.

ಕೆಲವು ಎಡಪಂಥೀಯ ಮತ್ತು ಮಾವೋವಾದಿ ಶಕ್ತಿಗಳು ರೈತರ ಹಾದಿ ತಪ್ಪಿಸಲು ನೋಡುತ್ತಿವೆ. ತಮ್ಮ ಅಜೆಂಡಾ ಇಟ್ಟುಕೊಂಡು ರೈತ ಚಳುವಳಿಗಳನ್ನು ಹೈಜಾಕ್ ಮಾಡಿ ಅವರನ್ನು ದುರುಪಯೋಗ ಮಾಡಿಕೊಳ್ಳಲು ನೋಡುತ್ತಿದ್ದಾರೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೂಡ ಆರೋಪಿಸಿದ್ದಾರೆ.

SCROLL FOR NEXT