ದೇಶ

ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ: ಮತ್ತೋರ್ವ ಟಿಎಂಸಿ ಸಚಿವ ಬಿಜೆಪಿಗೆ ಸೇರಲು ಸಿದ್ಧ: ಸಂಪುಟ ಸಭೆಗೆ ಗೈರು!

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರುತ್ತಿರುವ ಸಚಿವರು, ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗ ಈ ಪಟ್ಟಿಗೆ ಟಿಎಂಸಿಯ ಮತ್ತೋರ್ವ ಸಚಿವ ಸೇರುವ ಸಾಧ್ಯತೆ ಇದೆ. 

ನಬನ್ನಾದಲ್ಲಿ ಡಿ.22 ರಂದು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಲ್ವರು ಸಚಿವರು ಗೈರು ಹಾಜರಾಗಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ನಾಲ್ವರ ಪೈಕಿ ಮೂವರು ಸಚಿವರುಗಳಿಗೆ ಗೈರಾಗಲು ನೈಜ ಕಾರಣವಿತ್ತು. ಆದರೆ ಓರ್ವ ಸಚಿವ ಮಾತ್ರ ಉದ್ದೇಶಪೂರ್ವಕವಾಗಿ ಗೈರಾಗಿದ್ದು, ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಉತ್ತರ ಬಂಗಾಳ ಅಭಿವೃದ್ಧಿ ಸಚಿವ ರವೀಂದ್ರನಾಥ್ ಘೋಷ್, ಪ್ರವಾಸೋದ್ಯಮ ಸಚಿವ ಗೌತಮ್ ದೇವ್, ಮೀನುಗಾರಿಕಾ ಸಚಿವಾ ಚಂದ್ರಕಾಂತ್ ಸಿನ್ಹಾ ಅವರಿಗೆ ಕಾರಣಾಂತರಗಳಿಂದ ಸಭೆಗೆ ಬರಲು ಆಗಲಿಲ್ಲ ಆದರೆ ಅರಣ್ಯ ಸಚಿವ ರಾಜೀವ್ ಬ್ಯಾನರ್ಜಿ ಉದ್ದೇಶಪೂರ್ವಕವಾಗಿ ಸಭೆಗೆ ಗೈರಾಗಿದ್ದು, ಟಿಎಂಸಿ ಬಿಟ್ಟು ಬಿಜೆಪಿ ಸೇರುವ ಸಾಧ್ಯತೆ ಇದೆ.  

ರವೀಂದ್ರನಾಥ್ ಘೋಷ್ ಗೆ ಕೋವಿಡ್-19 ದೃಢಪಟ್ಟಿದ್ದು, ಯಾವುದೇ ಆಡಳಿತಾತ್ಮಕ ಚಟುವಟಿಕೆಗಳಲ್ಲಿ ಅವರು ಸದ್ಯಕ್ಕೆ ಭಾಗಿಯಾಗುತ್ತಿಲ್ಲ. ಪೌತಮ್ ದೇವ್, ಉತ್ತರ ಬಂಗಾಳದಲ್ಲಿ ಪ್ಯಾಂಡಮಿಕ್ ಅವಧಿಯಲ್ಲಿ ಕೋಲ್ಕತ್ತಾಗೆ ಪ್ರಯಾಣಿಸುವುದು ಸೂಕ್ತವಲ್ಲ ಎಂದು ಟಿಎಂಸಿ ನಾಯಕರೇ ಹೇಳಿದ್ದಾರೆ. ಬೋಲ್ಪುರ್ ನ ಚಂದ್ರಕಾಂತ್ ಸಿನ್ಹಾ ಡಿ.28-29 ರಂದು ಸಿಎಂ ಭೇಟಿ ಹಿನ್ನೆಲೆಯಲ್ಲಿ ಅಲ್ಲಿನ ವ್ಯವಸ್ಥೆಗಳನ್ನು ನಿರ್ವಹಿಸುವುದರಲ್ಲಿ ವ್ಯಸ್ತರಾಗಿದ್ದಾರೆ ಎಂದು ಟಿಎಂಸಿ ತಿಳಿಸಿದೆ.

ಆದರೆ ರಾಜೀವ್ ಬ್ಯಾನರ್ಜಿಯ ಸಂಪರ್ಕ ಸಾಧ್ಯವಾಗದೇ ಇದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇತ್ತೀಚೆಗಷ್ಟೇ ಹಲವು ಸಂದರ್ಭಗಳಲ್ಲಿ ಬ್ಯಾನರ್ಜಿ ಟಿಎಂಸಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದೂ ಇದೆ.

SCROLL FOR NEXT