ದೇಶ

2020 ವರ್ಷದ ಕೊನೆಯ ದಿನವಾದ ಇಂದು ದೇಶದ ವೈದ್ಯರು, ಆರೋಗ್ಯ ಸಿಬ್ಬಂದಿ, ಕೊರೋನಾ ವಾರಿಯರ್ಸ್ ಗಳನ್ನು ನೆನೆಯಬೇಕು: ಪ್ರಧಾನಿ ಮೋದಿ

Sumana Upadhyaya

ರಾಜ್ ಕೋಟ್ (ಗುಜರಾತ್): 2020 ಕಳೆದು ನಾಳೆ 2021ನೇ ಇಸವಿಗೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತು ಗತಿಸಿದ ವರ್ಷದಲ್ಲಿ ವೈದ್ಯರು, ಆರೋಗ್ಯ ವಲಯದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿದ ಕೊರೋವಾ ವಾರಿಯರ್ಸ್ ಗಳ ಬಗ್ಗೆ ನೆನೆಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಕೊರೋನಾ ವೈರಸ್ ಮಹಾಮಾರಿ ಲಗ್ಗೆಯಿಟ್ಟ ನಂತರ ಆರೋಗ್ಯ ವಲಯದಲ್ಲಿ ತಮ್ಮ ಜೀವವನ್ನು ಒತ್ತೆಯಿಟ್ಟು ಸಮಾಜದ ಜನರ ಜೀವ ರಕ್ಷಣೆಗಾಗಿ ದುಡಿದವರಿಗೆ ಈ ಸಮಯದಲ್ಲಿ ಕೃತಜ್ಞತೆಗಳನ್ನು ಹೇಳುತ್ತೇನೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

2020ನೇ ಇಸವಿಯ ಈ ಕೊನೆ ದಿನ ಭಾರತದ ಕೋಟ್ಯಂತರ ವೈದ್ಯರು, ಆರೋಗ್ಯ ವಲಯ ಕಾರ್ಯಕರ್ತರು, ಶುಚಿತ್ವ ವಲಯದಲ್ಲಿ ಕೆಲಸ ಮಾಡುವವರು, ಕೊರೋನಾ ವಾರಿಯರ್ಸ್ ಗಳನ್ನು ನೆನೆದು ಅವರಿಗೆ ಅಭಿನಂದನೆ ಹೇಳಬೇಕು. ಎಲ್ಲರೂ ಒಗ್ಗಟ್ಟಾದರೆ ಎಂತಹ ಕಠಿಣ ಪರಿಸ್ಥಿತಿಗಳನ್ನು ಕೂಡ ಎದುರಿಸಬಹುದು ಎಂಬುದನ್ನು ಈ ವರ್ಷದ ಸವಾಲು ನಮಗೆ ತೋರಿಸಿಕೊಟ್ಟಿದೆ ಎಂದರು.

ಅವರು ಇಂದು ಗುಜರಾತ್ ನ ರಾಜ್ ಕೋಟ್ ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ(ಏಮ್ಸ್) ಸಂಸ್ಥೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಆರೋಗ್ಯವೇ ಭಾಗ್ಯ ಎಂಬುದನ್ನು 2020ನೇ ಇಸವಿ ನಮಗೆ ಕಲಿಸಿಕೊಟ್ಟಿದೆ. ಈ ವರ್ಷ ಪೂರ್ತಿ ನಮಗೆ ಸವಾಲಾಗಿತ್ತು. ಹೊಸ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ, ನೀತಿಯೊಂದಿಗೆ ನಾವು 2020ನೇ ಇಸವಿಗೆ ಶುಭ ವಿದಾಯ ಹೇಳೋಣ, ಈ ವರ್ಷದ ಅನುಭವಗಳೊಂದಿಗೆ ಮುಂದಿನ ವರ್ಷದ ಆದ್ಯತೆಗಳೊಂದಿಗೆ ಹೆಜ್ಜೆಯಿಡೋಣ ಎಂದು ಹೇಳಿದರು.

ನಮ್ಮ ಜೀವನದಲ್ಲಿ ಆರೋಗ್ಯಕ್ಕೆ ಸಮಸ್ಯೆಗಳಾದಾಗ ಉಳಿದ ವಿಷಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಕೊರೋನಾ ಸೋಂಕು ತೋರಿಸಿಕೊಟ್ಟಿದೆ. ಕೇವಲ ಒಂದು ಕುಟುಂಬ ಮಾತ್ರವಲ್ಲ ಇಡೀ ಸಮಾಜ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇಂದು ಏಮ್ಸ್ ಸಂಸ್ಥೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ದೇಶದಲ್ಲಿ ಮತ್ತೊಂದು ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸೋಣ ಎಂದು ಹೇಳಿದರು.

ದೇಶದಲ್ಲಿ ಇಂದು ಕೊರೋನಾ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದಿನ ವರ್ಷ ಕೊರೋನಾಕ್ಕೆ ಲಸಿಕೆ ತರುವ ಕಾರ್ಯಕ್ರಮಕ್ಕೆ ಸಜ್ಜಾಗಿದ್ದೇವೆ ಎಂದು ಪ್ರಧಾನ ಮಂತ್ರಿ ಹೇಳಿದರು.

SCROLL FOR NEXT