ದೇಶ

'ಸಿಎಜಿ ವರದಿ ಸ್ವಲ್ಪ ಹಳೆಯದು, ಭಾರತೀಯ ಸೇನೆ ಇಂದು ಸನ್ನದ್ಧವಾಗಿದೆ: ಜ.ನಾರವಾನೆ 

Sumana Upadhyaya

ನವದೆಹಲಿ: ಸಿಯಾಚಿನ್ ನಂತಹ ಎತ್ತರದ ಕ್ಲಿಷ್ಟಕರ ಪ್ರದೇಶದಳಲ್ಲಿ ಸೇವೆ ಸಲ್ಲಿಸುವ ಭಾರತೀಯ ಸೇನೆಯ ಸೈನಿಕರಿಗೆ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲ, ಅವರಿಗೆ ದಿನಸಿ, ಬಟ್ಟೆಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಸದನದಲ್ಲಿ ವರದಿ ಸಲ್ಲಿಸಿದೆ ಎಂದು ಸುದ್ದಿಯಾಗಿತ್ತು.


ಅದಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಿಎಜಿ ವರದಿ ಸ್ವಲ್ಪ ಹಳೆಯದು, ಅದು 2015-16ರ ಪರಿಸ್ಥಿತಿಯನ್ನು ಹೇಳಿದೆ, ಆದರೆ ಇಂದು ಅಲ್ಲಿ ಆ ಪರಿಸ್ಥಿತಿಯಿಲ್ಲ, ಭಾರತೀಯ ಸೇನೆ ಇಂದು ಸರ್ವಸನ್ನದ್ಧವಾಗಿದೆ ಮತ್ತು ಸುಧಾರಿಸಿದೆ ಎಂದು ಹೇಳಿದ್ದಾರೆ.


ನಿನ್ನೆ ದೆಹಲಿಯಲ್ಲಿ ಅಬಸಾಹೆಬ್ ಗರ್ವಾರೆ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಜನರಲ್ ಮನೋಜ್ ನಾರವಾನೆ  ಸಿಎಜಿ ವರದಿ ಬಗ್ಗೆ ಸುದ್ದಿಗಾರರಲ್ಲಿ ಪ್ರಸ್ತಾಪಿಸಿದರು. ನೀವು ಸಿಎಜಿ ವರದಿಯನ್ನು ಸೂಕ್ಷ್ಮವಾಗಿ ನೋಡಿದರೆ ಗೊತ್ತಾಗುತ್ತದೆ, ಅದು 2015-16ರಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿದೆ. ಇಂದಿನ ಪರಿಸ್ಥಿತಿ ಬಗ್ಗೆ ಅದರಲ್ಲಿ ಪ್ರಸ್ತಾಪವಿಲ್ಲ. ಹೀಗಾಗಿ ಅದು ಹಳೆಯ ವರದಿ, ಈಗ ಅಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದರು.


ಇಂದು ಭಾರತೀಯ ಸೇನೆ ಬಹಳಷ್ಟು ಆಧುನೀಕರಣಗೊಂಡಿದೆ. ಸಿಯಾಚಿನ್ ಗೆ ಹೋದ ಪ್ರತಿಯೊಬ್ಬ ಸೈನಿಕರಿಗೆ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಬಟ್ಟೆಗಳು ಸಿಗುತ್ತವೆ. ಭಾರತೀಯ ಸೇನೆ ಅಲ್ಲಿಗೆ ಹೋಗುವ ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಡುತ್ತದೆ ಎಂದರು.


ಇನ್ನು ರಕ್ಷಣಾ ಬಜೆಟ್ ನಲ್ಲಿ ಸರ್ಕಾರದ ಹಣದ ಏರಿಕೆ ಬಗ್ಗೆ ಅವರು, ವರ್ಷದಿಂದ ವರ್ಷಕ್ಕೆ ಸರ್ಕಾರ ಶೇಕಡಾ 8ರಷ್ಟು ರಕ್ಷಣಾ ವಲಯಕ್ಕೆ ಹೆಚ್ಚಳ ಮಾಡುತ್ತದೆ. ಇದನ್ನು ಸರಿಯಾಗಿ ಸದ್ಭಳಕೆ ಹೇಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಾವು ಅಧ್ಯಯನ ಮಾಡುತ್ತಿದ್ದೇವೆ. ಆಧುನೀಕರಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.


ಕಳೆದ ವರ್ಷ ನಾಲ್ಕರಿಂದ ಐದು ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಭಾರತೀಯ ಸೇನೆಗೆ ಸೇರಿಸಲಾಗಿದೆ. ಹೀಗಾಗಿ ಆಧುನೀಕರಣ ಭಾರತೀಯ ಸೇನೆಗೆ ದೊಡ್ಡ ಸಂಗತಿಯಲ್ಲ. 2020-21ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ವಲಯಕ್ಕೆ ಬಜೆಟ್ ನಲ್ಲಿ ಹಣವನ್ನು 3.37 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಕಳೆದ ವರ್ಷ ಈ ಮೊತ್ತ 3.18 ಲಕ್ಷ ಕೋಟಿ ರೂಪಾಯಿಗಳಿದ್ದವು. 

SCROLL FOR NEXT