ದೇಶ

ದೆಹಲಿ ಮುಖ್ಯಮಂತ್ರಿ ಪಟ್ಟಕ್ಕೆ ಬಿಜೆಪಿಯಲ್ಲಿ ಯಾವುದೇ ಅರ್ಹ ವ್ಯಕ್ತಿಗಳಿಲ್ಲ: ಅರವಿಂದ ಕೇಜ್ರಿವಾಲ್

Manjula VN

ನವದೆಹಲಿ: ದೇಶದ ರಾಜಧಾನಿ ದೆಹಲಿ ಮುಖ್ಯಮಂತ್ರಿ ಪಟ್ಟಕ್ಕೆ ಬಿಜೆಪಿ ಪಕ್ಷದಲ್ಲಿ ಯಾವುದೇ ಅರ್ಹ ವ್ಯಕ್ತಿಗಳಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ. 

ದೆಹಲಿ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣಾ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೇಜ್ರಿವಾಲ್ ಅವರು ಕೇಸರಿ ಪಾಳಯದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಯಾವ ಅಭ್ಯರ್ಥಿಯನ್ನು ನಿಲ್ಲಿಸುತ್ತದೆ ಎಂಬುದನ್ನು ತಿಳಿಯರು ಜನರು ಉತ್ಸುಕರಾಗಿದ್ದಾರೆ. ಚುನಾವಣೆಯನ್ನು ಧ್ರುವೀಕರಣ ನಡೆಸಲು ಬಿಜೆಪಿ ಯತ್ನ ನಡೆಸುತ್ತಿದೆ. ಆದರೆ, ಫಲಿತಾಂಶ ಬಂದ ಬಳಿಕವಷ್ಟೇ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದೆಯೋ, ಇಲ್ಲವೋ ಎಂಬುದು ಬಿಜೆಪಿಗೆ ತಿಳಿಯಲಿದೆ ಎಂದು ಹೇಳಿದ್ದಾರೆ. 

ಉತ್ತಮ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ಆಧುನಿಕ ರಸ್ತೆ ಹಾಗೂ 24 ಗಂಟೆಗಳ ವಿದ್ಯುತ್ ವ್ಯವಸ್ಥೆಯನ್ನು ಬಯಸುವವರು ಆಮ್ ಆದ್ಮಿ ಪಕ್ಷದ ಮತದಾರರಾಗಿದ್ದಾರೆಂದು ತಿಳಿಸಿದ್ದಾರೆ. 

ಇದೇ ವೇಳೆ ಶಾಹೀನ್ ಬಾಗ್ ಹೋರಾಟ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಹತ್ತಿರ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಹೀನ್ ಬಾಗ್ ರಸ್ತೆಯನ್ನು ಇನ್ನೂ ತೆರವುಗೊಳಿಸಿಲ್ಲ. ಶಾಹೀನ್ ಬಾಗ್ ರಸ್ತೆಯನ್ನು ತೆರವುಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಯಾವುದು ತಡೆಯುತ್ತಿದೆ. ಶಾಹೀನ್ ಬಾಗ್ ನಲ್ಲಿ ಗದ್ದಲವುಂಟು ಮಾಡುವುದರ ಹಿಂದಿನ ಉದ್ದೇಶವೇನು? ದೆಹಲಿ ಜನರಿಗೇಕೆ ಸಮಸ್ಯೆ ನೀಡುತ್ತಿದ್ದಾರೆ. ಪ್ರತಿಭಟನೆ ಮೂಲಕ ಕೀಳು ರಾಜಕೀಯ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. 

ಕೇಸರಿ ಪಾಳಯದ ನಾಯಕರು ನಗರದ ಅನಧಿಕೃತ ವಸಾಹತುಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ ಮತ್ತು ಜನರ ಹಾದಿ ತಪ್ಪಿಸುತ್ತಿದ್ದಾರೆ. ಆಪ್ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ಉಚಿತ ಯೋಜನೆಗಳು ಮತ್ತೆ ಮುಂದುವರೆಯಲಿವೆ. ಅಗತ್ಯ ಬಿದ್ದರೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ. 

SCROLL FOR NEXT