ದೇಶ

ಒಂದೆಡೆ ಹೈಕಮಾಂಡ್ ವಿರೋಧ: ರಾಜಸ್ತಾನದಲ್ಲಿ ಸಿಎಎ ಜಾರಿಗೆ ತರಬೇಕು - ಕಾಂಗ್ರೆಸ್ ಸ್ಪೀಕರ್

Vishwanath S

ಜೈಪುರ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಇದೇ ಅಲ್ಲದೆ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ರಾಜ್ಯದಲ್ಲಿ ಸಿಎಎ ಅನ್ವಯವಾಗುವುದಿಲ್ಲ ಎಂದು ಹೇಳಿದ್ದು ಇದಕ್ಕೆ ವಿರುದ್ಧವಾಗಿ ಸ್ಪೀಕರ್ ಡಾ. ಸಿಪಿ ಜೋಶಿ ಮಾತ್ರ ರಾಜ್ಯದಲ್ಲಿ ಸಿಎಎ ಜಾರಿಗೆ ತರಬೇಕಾಗಿದೆ ಎಂದು ಹೇಳಿದ್ದು ಈ ಹೇಳಿಕೆ ಇದೀಗ ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಿಎಎ ವಿರೋಧಿಸಿ ದೇಶಾದ್ಯಂತ ಚರ್ಚೆ ಮತ್ತು ಪ್ರತಿಭಟನೆಗಳು ನಡೆಯುತ್ತಿವೆ. ಸಿಎಎ ಒಂದು ಕಾನೂನು ಮತ್ತು ಅದರಲ್ಲಿ ಬದಲಾವಣೆಗಳನ್ನು ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿ ಇಲ್ಲ. ಉದಾಹರಣೆಗೆ ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಯಡಿ ಕಾನೂನನ್ನು ಜಾರಿಗೆ ತಂದಿತ್ತು. ಅಲ್ಲಿ ರಾಜ್ಯಗಳು ಅದನ್ನು ಕಾರ್ಯಗತಗೊಳಿಸಲು ಬಯಸುತ್ತವೆಯೋ ಇಲ್ಲವೋ ಎಂದು ಹೇಳಿತ್ತು. ಆದರೆ ಪೌರತ್ವ ಕಾನೂನು ಭಾರತದ ಸಂವಿಧಾನದ ಅಡಿಯಲ್ಲಿ ಬರುವುದರಿಂದ ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಡಾ. ಜೋಶಿ ಅವರು ಹೇಳಿದ್ದಾರೆ.

ನಾವು ದೇಶದ ನೀತಿಗಳನ್ನು ಬದಲಾಯಿಸಲು ಬಯಸುತ್ತೇವೆ, ಆದರೆ ಮತದಾರರಿಗೆ ಶಿಕ್ಷಣ ನೀಡಲು ನಾವು ಬಯಸುವುದಿಲ್ಲ. ಈಗ ವಿದ್ಯಾವಂತ ಯುವಕರು ಮತದಾರರಿಗೆ ಶಿಕ್ಷಣ ನೀಡಲಿದ್ದಾರೆ. ನಮಗೆ ಈ ಹಕ್ಕನ್ನು ನೀಡಲು ಸಾಧ್ಯವಾಗದಿದ್ದರೆ, ಮುಂದಿನ ದಿನಗಳಲ್ಲಿ, ನಮ್ಮ ಸಂಸತ್ತಿನ ಪ್ರಜಾಪ್ರಭುತ್ವದ ಮುಂದೆ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎದ್ದಿರುತ್ತದೆ ಎಂದು ಜೋಶಿ ಅವರು ಜೈಪುರದ ಬಾಲಕಿಯರ ಕಾಲೇಜಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದ್ದಾರೆ. 

ಡಿಸೆಂಬರ್ 21ರಂದು ಜೈಪುರದಲ್ಲಿ ಸಿಎಎ ವಿರುದ್ಧ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮತ್ತು ವಿವಿಧ ಸಮುದಾಯಗಳು ಶಾಂತಿ ಮೆರವಣಿಗೆ ನಡೆಸಿತ್ತು. ಈ ವೇಳೆ ಸಿಎಎ ಮತ್ತು ಎನ್ಆರ್ಸಿ ರಾಜ್ಯದಲ್ಲಿ ಜಾರಿಗೆ ಬರುವುದಿಲ್ಲ ಎಂದು ಸಿಎಂ ಗೆಹ್ಲೋಟ್ ಘೋಷಿಸಿದ್ದರು. 

SCROLL FOR NEXT