ದೇಶ

ಕೇಂದ್ರೀಯ ಸಂಸ್ಥೆಗಳಿಂದ ಕಿರುಕುಳ, ಒತ್ತಡ ಸಾಕಷ್ಟು ಜನರನ್ನು ಬಲಿಪಡೆದುಕೊಂಡಿದೆ: ಮಮತಾ ಬ್ಯಾನರ್ಜಿ ಆಕ್ರೋಶ

Srinivas Rao BV

ಕೊಲ್ಕಾತ್ತಾ: ಕೇಂದ್ರ ಸರ್ಕಾರ ವಿವಿಧ ಸಂಸ್ಥೆಗಳ ಒತ್ತಡ ಹಾಗೂ ಕಿರುಕುಳದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಜೀವಗಳನ್ನು ಬಲಿಪಡೆದುಕೊಂಡಿದೆ ಎಂದು ತೃಣ ಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ.

ಮುಂಬೈನಲ್ಲಿ ಸೋಮವಾರ ನಿಧನ ಹೊಂದಿದ್ದ ಪಕ್ಷದ ಮಾಜಿ ಸಂಸದ ತಪಸ್ ಪಾಲ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ವೇಳೆ ಅವರು ಕೇಂದ್ರ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಪಸ್ ಪಾಲ್ ಪಶ್ಚಿಮ ಬಂಗಾಳದ ನಟರೂ ಆಗಿದ್ದು, ರೋಸ್ ವ್ಯಾಲಿ ಚಿಟ್ ಫಂಡ್ ನ ಪ್ರಮುಖ ಆರೋಪಿಯಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿದ್ದ ಪಾಲ್ ಒಂದು ವರ್ಷಗಳ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. 

ಕೇಂದ್ರೀಯ ಸಂಸ್ಥೆಗಳ ಕಿರುಕುಳ ಹಾಗೂ ಒತ್ತಡದಿಂದಾಗಿ ಪಕ್ಷದ ಮೂವರು ನಾಯಕರು ಮೃತಪಟ್ಟಿದ್ದಾರೆ. ಮೊದಲು ಪಕ್ಷದ ಮಾಜಿ ಸಂಸದ ಸುಲ್ತಾನ್ ಅಹಮದ್, ಪಕ್ಷದ ಸಂಸದ ಪ್ರಸೂನ್ ಬ್ಯಾನರ್ಜಿ ಅವರ ಪತ್ನಿ, ಈಗ ತಪಸ್ ಪಾಲ್ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಹಲವು ಜನರನ್ನು ಕಾರಣವಿಲ್ಲದೆ ಅನಗತ್ಯವಾಗಿ ಬಂಧಿಸಿ ಜೈಲಿನಲ್ಲಿರಿಸಲಾಗಿದೆ, ಆದರೆ ಅವರು ಏನು ಅಪರಾಧ ಮಾಡಿದ್ದಾರೆ ಅಥವಾ ಅಪರಾಧದಲ್ಲಿ ಅವರು ವಹಿಸಿದ್ದ ಪಾತ್ರ ಏನು ಎಂಬುದನ್ನು ಸಾಬೀತು ಪಡಿಸಲು ಕೇಂದ್ರೀಯ ಸಂಸ್ಥೆಗಳಿಂದ ಈವರೆಗೆ ಸಾಧ್ಯವಾಗಿಲ್ಲ. ಒಂದೊಮ್ಮೆ ಯಾವುದೇ ವ್ಯಕ್ತಿ ಅಪರಾಧ ಎಸಗಿದ್ದರೆ, ತಪ್ಪು ಮಾಡಿದ್ದರೆ ಅಂತಹವ್ಯಕ್ತಿಗಳು ಶಿಕ್ಷೆ ಅನುಭವಿಸಬೇಕು. ಆದರೆ ತಪಸ್ ಪಾಲ್ ಹಾಗೂ ಇತರರು ಮಾಡಿರುವ ತಪ್ಪು ಏನು? ಎಂಬುದು ತಮಗೆ ಈವರೆಗೆ ತಿಳಿಯುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಲಾವಿದರು ನಟರು ಸಾಕಷ್ಟು ಸಂಸ್ಥೆಗಳ ಜೊತೆ ಗುರುತಿಸಿಕೊಂಡು, ಬ್ರಾಂಡ್ ಅಂಬಾಸಿಡರ್ ಗಳಾಗಿರುತ್ತಾರೆ. ಅಂತೆಯೇ ತಪಸ್ ಪಾಲ್ ಸಹ ರೋಸ್ ವ್ಯಾಲಿ ಸಮೂಹ ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದರು, ಇದೇ ತಪಸ್ ಪಾಲ್ ಅವರು ಮಾಡಿದ್ದ ದೊಡ್ಡ ತಪ್ಪಾಗಿದೆಯೇ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
 

SCROLL FOR NEXT