ದೇಶ

ಡೊನಾಲ್ಡ್ ಟ್ರಂಪ್ ಅವರ ಭೇಟಿಯಿಂದ ಭಾರತಕ್ಕೆ ಏನೂ ಲಾಭವಿಲ್ಲ: ಸುಬ್ರಹ್ಮಣ್ಯನ್ ಸ್ವಾಮಿ, ಸೀತಾರಾಮ್ ಯೆಚೂರಿ 

Sumana Upadhyaya

ಭುವನೇಶ್ವರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯಿಂದ ಅಮೆರಿಕದ ಆರ್ಥಿಕತೆಗೆ ಲಾಭವೇ ಹೊರತು ನಮಗೇನೂ ಉಪಯೋಗವಿಲ್ಲ ಎಂದು ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟೀಕಿಸಿದ್ದಾರೆ.


ನಿನ್ನೆ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಈ ಇಬ್ಬರೂ ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯನ್ ಸ್ವಾಮಿ, ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಭಾರತಕ್ಕೆ ಬರುತ್ತಿದ್ದಾರೆ ಹೊರತು ನಮ್ಮ ದೇಶದ ಆರ್ಥಿಕ ಲಾಭಕ್ಕಲ್ಲ. ಹೀಗಾಗಿ ಅವರು ಭಾರತಕ್ಕೆ ಬರುವುದರಿಂದ ನಮಗೆ ಯಾವುದೇ ಲಾಭವಾಗುತ್ತದೆ ಎಂದು ಅನಿಸುವುದಿಲ್ಲ ಎಂದು ಹೇಳಿದರು.


ಟ್ರಂಪ್ ಭೇಟಿ ವೇಳೆ ಕೆಲವು ರಕ್ಷಣಾ ಒಪ್ಪಂದ ಏರ್ಪಡಬಹುದು. ಅದರಿಂದ ಅವರ ದೇಶಕ್ಕೆ ಲಾಭವಿದೆ. ಅಷ್ಟಕ್ಕೂ ಅಮೆರಿಕದಿಂದ ಖರೀದಿಸುವ ರಕ್ಷಣಾ ಸಾಮಗ್ರಿಗಳಿಗೆ ನಾವು ಹಣ ಕೊಡುತ್ತೇವೆ, ಅದನ್ನು ಅವರು ಉಚಿತವಾಗಿ ನೀಡುತ್ತಿಲ್ಲ ಎಂದು ಸುಬ್ರಹ್ಮಣ್ಯ ಸ್ವಾಮಿ ತಮ್ಮದೇ ಪಕ್ಷದ ಸರ್ಕಾರವನ್ನು ಟೀಕಿಸಿದರು.


ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮ್ ಯೆಚೂರಿ, ಟ್ರಂಪ್ ಅವರ ಭೇಟಿಯಿಂದ ನಮಗೆ ಆತಂಕವಾಗುತ್ತಿದೆ. ಅಮೆರಿಕ ರೈತರಿಗೆ ರಿಯಾಯಿತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ ಎಂದರು.


ಡೊನಾಲ್ಡ್ ಟ್ರಂಪ್ ಅವರು ನಾಳೆಯಿಂದ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ.

SCROLL FOR NEXT