ದೇಶ

ನೇಪಾಳದಿಂದ ಉತ್ತರಪ್ರದೇಶ ಪ್ರವೇಶಿಸಿದ 2 ಇಸಿಸ್ ಉಗ್ರರು: ಹೈ ಅಲರ್ಟ್ ಘೋಷಣೆ

Manjula VN

ನವದೆಹಲಿ: ನೇಪಾಳ ಗಡಿ ಮೂಲಕ ಭಾರತ ಪ್ರವೇಶಿಸಿರುವ ಇಬ್ಬರು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಇಬ್ಬರು ಭಯೋತ್ಪಾದಕರು ಇದೀಗ ಉತ್ತರಪ್ರದೇಶದಲ್ಲಿ ಅಡಗಿ ಕುಳಿತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಉಗ್ರರು ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಬಸ್ತಿ, ಗೋರಾಖ್ಪುರ, ಸಿದ್ಧಾರ್ಥ್ ನಗರ, ಕುಶಿನಗರ ಮತ್ತು ಮಹಾರಾಜ್ ಗಂಜ್ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ  ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ಕುರಿತಂತೆ ಬಸ್ತಿ ಐಡಿ ಆಶುತೋಷ್ ಕುಮಾರ್ ಅವರು ಮಾಹಿತಿ ನೀಡಿದ್ದು, ಇಬ್ಬರು ಉಗ್ರರು ಉತ್ತರಪ್ರದೇಶ ಪ್ರವೇಸಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ. 

ಇಬ್ಬರು ಉಗ್ರರನ್ನು ಖ್ವಾಜಾ ಮೊನುದ್ದೀನ್ ಮತ್ತು ಅಬ್ದುಲ್ ಸಮದ್ ಎಂದು ಹೇಳಲಾಗುತ್ತಿದ್ದು, ಈ ಹಿಂದೆ ಈ ಇಬ್ಬರೂ ಉಗ್ರರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ 2017ರ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. 

ಈ ಹಿಂದೆ ಖ್ವಾಜಾ ಮೊಯಿನುದ್ದೀನ್'ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಚೆನ್ನೈನಲ್ಲಿ ಬಂಧನಕ್ಕೊಳಪಡಿಸಿದ್ದರು. ಮೊಯಿನುದ್ದೀನ್ ಇಸಿಸ್ ಸಂಘಟನೆಯೊಂದಿಗೆ ಕೈಜೋಡಿಸಿದ್ದ ಎಂದು ಹೇಳಲಾಗುತ್ತಿತ್ತು. 

ಸಿರಿಯಾದಿಂದ ಮರಳಿ ಬಂದಿದ್ದ ಮೊಯಿನುದ್ದೀನ್ ದಕ್ಷಿಣ ಭಾರತದ ರಾಷ್ಟ್ರದಲ್ಲಿ ನೆಲೆಯೂರಿದ್ದ ಅಲ್ಲಿ ಆತನ ತಲೆಕೆಡಿಸಿದ್ದ ಕೆಲವರು ಇಸಿಸ್ ಉಗ್ರ ಸಂಘಟನೆ ಸೇರುವಂತೆ ಮಾಡಿದ್ದರು. ಈತ ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆಂದು ತಿಳಿದುಬಂದಿದೆ. 

ಇನ್ನು ಮತ್ತೊಬ್ಬ ಉಗ್ರ ಅಬ್ದುಲ್ ಸಮದ್ ಕೂಡ ದಕ್ಷಿಣ ಭಾರತದಲ್ಲಿ ಸಕ್ರಿಯನಾಗಿದ್ದು, 2018ರ ಫೆಬ್ರವರಿ ತಿಂಗಳಿನಲ್ಲಿ ಈತ ಬಂಧನಕ್ಕೊಳಗಾಗಿದ್ದ. ಗಲ್ಫ್ ರಾಷ್ಟ್ರಗಳಿಗೆ ಹವಾಲಾ ದಂಧೆ ಮೂಲಕ ರೂ.3.50 ಲಕ್ಷ ಹಣವನ್ನು ನೀಡಿದ ಪ್ರಕರಣ ಈತನ ಮೇಲಿದೆ. ಅಲ್ಲಗೆ ಪುಣೆ ಸ್ಫೋಟದಲ್ಲಿ  ಈತನ ಕೈವಾಡವಿತ್ತು. ನಿಷೇಧಿತ ಉಗ್ರ ಸಂಘಟನೆಯಾಗಿರುವ ಸಿಮಿ ಜೊತೆಗೆ ಈತ ಕೈಜೋಡಿಸಿದ್ದಾನೆ. ಉಗ್ರರ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಪ್ರಕರಣ ಕೂಡ ಈತನ ಮೇಲಿದೆ ಎಂದು ಹೇಳಲಾಗುತ್ತಿದೆ. 

SCROLL FOR NEXT