ದೇಶ

ನಾಳಿನ ರಾಷ್ಟ್ರವ್ಯಾಪಿ ಮುಷ್ಕರಕ್ಕೆ 25 ಕೋಟಿ ಜನಬೆಂಬಲ : ಕಾರ್ಮಿಕರ ನಾಯಕರ ವಿಶ್ವಾಸ

Shilpa D

ನವದೆಹಲಿ: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ ನಾಳಿನ ಬಾರತ್ ಬಂದ್ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ 25 ಕೋಟಿ ಜನರು ಭಾಗವಹಿಸಲಿದ್ದಾರೆ ಎಂದು ಕಾರ್ಮಿಕ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಸಂಘಗಳು ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಸೆವಾ, ಎಐಸಿಸಿಟಿಯು, ಎಲ್‌ಪಿಎಫ್, ಯುಟಿಯುಸಿ ಜೊತೆಗೆ ವಿವಿಧ ವಲಯದ ಸ್ವತಂತ್ರ ಒಕ್ಕೂಟಗಳು ಮತ್ತು ಸಂಘಗಳು ನಾಳೆ ಮುಷ್ಕರ ನಡೆಸುವ ಬಗ್ಗೆ ಕಳೆದ ಸೆಪ್ಟೆಂಬರ್‌ನಲ್ಲೇ ತೀರ್ಮಾನ ಮಾಡಿದ್ದವು.

ಸುಮಾರು 60 ವಿದ್ಯಾರ್ಥಿ ಸಂಘಟನೆಗಳು ಮತ್ತು ಕೆಲವು ವಿವಿಗಳ ಚುನಾಯಿತ ವಿದ್ಯಾರ್ಥಿ ಪದಾಧಿಕಾರಿಗಳು ಹೆಚ್ಚಿಸಿರುವ ಶುಲ್ಕಗಳು ಮತ್ತು ಶಿಕ್ಷಣದ ವಾಣಿಜ್ಯೀಕರಣದ ವಿರುದ್ಧ ಧ್ವನಿಯೆತ್ತುವ ಅಜೆಂಡಾದೊಂದಿಗೆ ಮುಷ್ಕರದಲ್ಲಿ ಕೈಜೋಡಿಸಲು ನಿರ್ಧರಿಸಿವೆ ಎಂದೂ ತಿಳಿಸಿರುವ ಹೇಳಿಕೆಯು,ಜಿಎನ್‌ಯು ಹಿಂಸಾಚಾರ ಮತ್ತು ಇತರ ವಿವಿ ಕ್ಯಾಂಪಸ್‌ಗಳಲ್ಲಿ ಇಂತಹುದೇ ಘಟನೆಗಳನ್ನು ಖಂಡಿಸಿದೆ. ಕಾರ್ಮಿಕ ಒಕ್ಕೂಟಗಳು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಏಕತೆಯನ್ನು ವ್ಯಕ್ತಪಡಿಸಿವೆ.

ಕಾರ್ಮಿಕ ವಿರೋಧಿ, ಜನ ವಿರೋಧಿ, ರಾಷ್ಟ್ರ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಇಂತಹ ಅನೇಕ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ನಾಯಕರು ಹೇಳಿದ್ದಾರೆ .

175ಕ್ಕೂ ಅಧಿಕ ರೈತರ ಮತ್ತು ಕೃಷಿ ಕಾರ್ಮಿಕರ ಒಕ್ಕೂಟಗಳು ಮುಷ್ಕರವನ್ನು ಬೆಂಬಲಿಸಲಿದ್ದು,ತಮ್ಮ ಬೇಡಿಕೆಗಳೊಂದಿಗೆ ಜ.8ನ್ನು ಗ್ರಾಮಿಣ ಭಾರತ ಬಂದ್ ದಿನವನ್ನಾಗಿ ಆಚರಿಸಲಿವೆ ಎಂದು ಹೇಳಿಕೆಯು ತಿಳಿಸಿದೆ.

SCROLL FOR NEXT