ದೇಶ

ಭಾರತ ಒಗ್ಗೂಡಿದೆಯೋ ಅಥವಾ ಧೃವೀಕರಣಗೊಂಡಿದೆಯೋ?: ಥಿಂಕ್ಎಡು ನಲ್ಲಿ ಸದಸ್ಯರ ಚರ್ಚೆ 

Srinivas Rao BV

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸುತ್ತಿರುವ ಥಿಂಕ್ ಎಡು ಕಾರ್ಯಕ್ರಮದ 2 ನೇ ದಿನ ರಿಪಬ್ಲಿಕ್ ಆಫ್ ಇಂಡಿಯಾ 2.0: ಈಸ್ ದು ಚೇಂಜ್ ಫಂಡಮೆಂಟಲ್ (’Republic of India 2.0: Is the Change Fundamenta’?) ಎಂಬ ಬಗ್ಗೆ ಚರ್ಚೆ ನಡೆಯಿತು. 

ಜಾತ್ಯಾತೀತತೆ, ರಾಷ್ಟ್ರದ ಏಕತೆ, ಇತ್ತೀಚೆಗೆ ನಡೆದ ಸಿಎಎ ಪ್ರತಿಭಟನೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಇಂದಿನ ಸೆಷನ್ ನಲ್ಲಿ ಚರ್ಚೆ ನಡೆಸಲಾಯಿತು. ಚರ್ಚೆಯಲ್ಲಿ ಭಾಗಿಯಾಗಿದ್ದ 4 ಸದಸ್ಯರ ಪೈಕಿ 3 ಜನ ಇತಿಹಾಸದಲ್ಲೇ ಭಾರತ ಕಂಡು ಕೇಳರಿಯದಷ್ಟು ಧೃವೀಕರಣಗೊಂಡಿದೆ ಎಂದು ಅಭಿಪ್ರಾಯಪಟ್ಟರೆ, ಮತ್ತೋರ್ವ ಸದಸ್ಯರು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ದೇಶ ಈಗ ಹೆಚ್ಚು ಒಗ್ಗೂಡಿದೆ, ಸಶಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಎನ್ ಸಿಪಿ ಸಂಸದ ಸುಪ್ರಿಯಾ ಸುಳೆ ಮಾತನಾಡಿ, ಈಗಿನಷ್ಟು ದೇಶ ಹಿಂದೆಂದೂ ಧೃವೀಕರಣಗೊಂಡಿರಲಿಲ್ಲ. ಈಗ ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಸಿಎಎಯ ಸಮಸ್ಯೆ ಇರೋದು ಹಿಂದು-ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದಂತೆ ಅಲ್ಲ, ಆದರೆ ಸಣ್ಣ ಸಮುದಾಯಗಳಾದ ಆದಿವಾಸಿಗಳು ಹಾಗೂ ಬುಡಕಟ್ಟು ಜನರದ್ದು ಎಂದು ಹೇಳಿದ್ದು, ದೇಶದ ಸದ್ಯದ ಪರಿಸ್ಥಿತಿ ಸ್ವಾತಂತ್ರ್ಯಪೂರ್ವದಲ್ಲಿದ್ದಂತೆ ಭಾಸವಾಗುತ್ತಿದೆ ಎಂದಿದ್ದಾರೆ. 

ಸುಪ್ರಿಯಾ ಸುಳೆ ಅವರ ಅಭಿಪ್ರಾಯಕ್ಕೆ ತಲೆದೂಗಿರುವ ಡಿಎಂಕೆ ಸಂಸತ್ ಸದಸ್ಯ ಥಮಿಳಾಚಿ ತಂಗಪಾಂಡಿಯನ್, ಭಾರತ ಧಾರ್ಮಿಕ ಹಾಗೂ ಸಾಮಾಜಿಕ ಅನ್ಯಾಯದ ಹೆಸರಿನಲ್ಲಿ ಒಡೆದುಹೋಗುತ್ತಿದೆ. ಎನ್ ಇಇಟಿಯಲ್ಲಿ ನಾವು ತಮಿಳುನಾಡಿನ ಜನತೆ ಸಮಸ್ಯೆ ಅನುಭವಿಸಿದ್ದೇವೆ, ಆದರೆ ಪರೀಕ್ಷೆಗಳನ್ನು ಸಾಮಾಜಿಕ ನ್ಯಾಯಕ್ಕೂ ಸಂಬಂಧಿಸಿದೆ. ಅದನ್ನು ಕೇವಲ ಶಿಕ್ಷಣ ನೀತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ಇದೇ ವೇಳೆ ಮಾತನಾಡಿದ ಖುಷ್ಬು, ತಾವು ತಮಿಳುನಾಡಿನಲ್ಲಿರುವುದಕ್ಕೆ ಸಂತಸಪಡುವುದಾಗಿ ಹೇಳಿದ್ದು, ದೇಶಾದ್ಯಂತ ಧೃವೀಕರಣ ಇದ್ದರೂ ತಮಿಳುನಾಡಿನಲ್ಲಿ ಮಾತ್ರ ಸಾಮರಸ್ಯವಿದೆ. ಹಿಂದೂ-ಮುಸ್ಲಿಮರ ವಿಭಜನೆ ಕುರಿತು ಮಾತನಾಡುವಾಗ ಸಾಮರಸ್ಯವನ್ನು ಮುರಿಯುವುದಕ್ಕೆ ಇರುವುದು ಒಂದೇ ಮಾರ್ಗ ಅದು ಸಿಎಎ ಹಾಗೂ ಎನ್ ಆರ್ ಸಿ ಎಂದು ಹೇಳಿದ್ದಾರೆ. 

ಪ್ರಜಾಪ್ರಭುತ್ವವನ್ನು ಹೇಗೆ ನಿಗ್ರಹಿಸಲಾಗುತ್ತಿದೆ, ಭಿನ್ನಾಭಿಪ್ರಾಯಗಳನ್ನು ಹೇಗೆ ಟ್ರೋಲ್ ಮಾಡಲಾಗುತ್ತಿದೆ ಎಂಬುದನ್ನು ಇತ್ತೀಚೆಗಷ್ಟೇ ಜೆಎನ್ ಯು ಗೆ ಭೇಟಿ ನೀಡಿದ ದೀಪಿಕಾ ಪಡುಕೋಣೆಯ ಉದಾಹರಣೆಯನ್ನಿಟ್ಟುಕೊಂಡು ಸದಸ್ಯರು ಚರ್ಚೆ ನಡೆಸಿದರು. 

ಎಲ್ಲಾ ಸದಸ್ಯರ ಅಭಿಪ್ರಾಯಗಳಿಗೆ ತದ್ವಿರುದ್ಧವಾಗಿ ತಮ್ಮ ಅಭಿಪ್ರಾಯ ಮಂಡಿಸಿದ ಸಂಸದ ತೇಜಸ್ವಿ ಸೂರ್ಯ, ಯುವ ಭಾರತ ದಿಟ್ಟ, ಧೈರ್ಯಶಾಲಿಯಾಗಿದೆ. ನಮ್ಮ ನಿಲುವುಗಳನ್ನು ಗಟ್ಟಿಯಾಗಿ ಹೇಳುತ್ತಿದ್ದೇವೆ ಎಂಬ ವಾಸ್ತವ ನಮ್ಮನ್ನು ಧೃವೀಕರಣಗೊಳಿಸುವುದಿಲ್ಲ. ಕಾಶ್ಮೀರ ಭಾರತದೊಂದಿಗೆ ಸಂಪೂರ್ಣವಾಗಿ ಹಾಗೂ ಸಾಂವಿಧಾನಿಕವಾಗಿ ಸೇರಿದ್ದು, ಭಾರತದ ಏಕತೆಗೆ ಸಾಕ್ಷಿ ಎಂದು ಸಂಸದರು ಹೇಳಿದ್ದಾರೆ. 

ಸರ್ಕಾರ ಮುಸ್ಲಿಂ ಸಮುದಾಯದ ಯುವ ಮಹಿಳೆಯರ ಬಗ್ಗೆ ಕಾಳಜಿ ತೋರುವುದರಿಂದ ಆ ಮಹಿಳೆಯರಲ್ಲಿ ಸಬಲೀಕರಣದ ಭಾವನೆ ಮೂಡಿಸುತ್ತದೆ. ಯಾವುದೇ ವಿವಾಹದಲ್ಲಿ ಅವರನ್ನು ಕೆಟ್ಟದಾಗಿ ನಡೆಸಿಕೊಂಡರೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವ ವಿಶ್ವಾಸ ಅವರಲ್ಲಿ ಮೂಡಿದೆ, ಇದು ಹೊಸ ಭಾರತದ ಲಕ್ಷಣ ಎಂದು ಹೇಳಿದ್ದಾರೆ. 

SCROLL FOR NEXT