ದೇಶ

370 ನೇ ವಿಧಿ ರದ್ದುಪಡಿಸಿರುವುದು 'ಐತಿಹಾಸಿಕ ಹೆಜ್ಜೆ': ಸೇನಾ ಮುಖ್ಯಸ್ಥ ಜ.ನರವಾಣೆ 

Sumana Upadhyaya

ನವದೆಹಲಿ: ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವುದು ಪಾಶ್ಚಾತ್ಯ ನೆರೆ ದೇಶಗಳ ಯೋಜನೆಯನ್ನು ಭಗ್ನಗೊಳಿಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಹೇಳಿದ್ದಾರೆ. ಅವರು ಈ ಮಾತನ್ನು ಪಾಕಿಸ್ತಾನ ಮತ್ತು ಅದರ ಪ್ರತಿನಿಧಿಸುವ ನಾಯಕರನ್ನು ಉಲ್ಲೇಖಿಸಿ ಹೇಳಿದ್ದಾರೆ.


72ನೇ ಸೇನಾ ದಿನಾಚರಣೆ ಸಂದರ್ಭದಲ್ಲಿ ಸೇನಾ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಂವಿಧಾನ ವಿಧಿ 370 ರದ್ದುಪಡಿಸಿರುವುದು ಭಾರತ ಕೈಗೊಂಡ ಐತಿಹಾಸಿಕ ಹೆಜ್ಜೆಯಾಗಿದ್ದು ಜಮ್ಮು-ಕಾಶ್ಮೀರದ ಮೇಲೆ ತೆಗೆದುಕೊಂಡ ನಿರ್ಧಾರ ದೇಶದ ಇತರ ಭಾಗಗಳಿಗೆ ಸಂಬಂಧ ಹೊಂದಿರುತ್ತದೆ ಎಂದರು.


ಭಾರತದ ಈ ಮಹತ್ವಪೂರ್ಣ ನಿರ್ಧಾರ ಪಶ್ಚಿಮ ನೆರೆಯ (ಪಾಕಿಸ್ತಾನ) ನಡೆಸುತ್ತಿರುವ ಪರೋಕ್ಷ ಸಮರಕ್ಕೆ ದೊಡ್ಡ ಅಡ್ಡಿಯಾಗಿದೆ ಎಂದು ಜನರಲ್ ನರವಾಣೆ ಹೇಳಿದರು. ಭಯೋತ್ಪಾದನೆಯನ್ನು ಭಾರತ ಸಹಿಸುವುದೇ ಇಲ್ಲ. ಭಯೋತ್ಪಾದನೆ ವಿರುದ್ಧ ದಿಟ್ಟ ಉತ್ತರ ನೀಡಲು ನಮ್ಮಲ್ಲಿ ಹಲವು ಆಯ್ಕೆಗಳಿವೆ ಮತ್ತು ಅವುಗಳನ್ನು ಬಳಸಿಕೊಳ್ಳಲು ಹಿಂದೇಟು ಕೂಡ ಹಾಕುವುದಿಲ್ಲ ಎಂದರು.


ಈಶಾನ್ಯ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಅದು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ನ ನಿರಂತರ ಪ್ರಯತ್ನದಿಂದ ಆಗಿದೆ. ಹಲವು ಭಯೋತ್ಪಾದಕ ಗುಂಪುಗಳ ಜೊತೆ ಮಾತುಕತೆ ಮುಂದುವರಿದಿದೆ ಎಂದರು.


ಭಾರತೀಯ ಸೇನೆ ತನ್ನ ಸಾಮರ್ಥ್ಯವನ್ನು ಅಂತರಿಕ್ಷ, ಸೈಬರ್, ವಿಶೇಷ ಕಾರ್ಯಾಚರಣೆ ಮತ್ತು ಎಲೆಕ್ಟ್ರಾನಿಕ್ ಯುದ್ಧಗಳಲ್ಲಿ ತನ್ನ ಸಾಮರ್ಥ್ಯವನ್ನು ಸೇನೆ ಹೆಚ್ಚಿಸಿಕೊಂಡಿದೆ.ಯುದ್ಧದ ಮುಂದಿನ ರೂಪದ ಮೇಲೆ ನಾವು ಕಣ್ಣಿಟ್ಟಿದ್ದೇವೆ. 21ನೇ ಶತಮಾನದಲ್ಲಿ ಸಮಗ್ರ ಯುದ್ಧ ಗುಂಪುಗಳ ರಚನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ನರವಾಣೆ ಹೇಳಿದರು.


ಚಿನಾರ್ ಪಡೆಯನ್ನು ಶ್ಲಾಘಿಸಿದ ಪ್ರಧಾನಿ: ಭಾರತೀಯ ಸೇನಾ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಶ್ಮೀರ ಕಣಿವೆಯ ಬೃಹತ್ ಹಿಮಪಾತದ ನಡುವೆ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ ಚಿನಾರ್ ಪಡೆ ಸಿಬ್ಬಂದಿಯ ಧೈರ್ಯ, ಸಾಹಸವನ್ನು ಶ್ಲಾಘಿಸಿದ್ದಾರೆ.


ಚಿನಾರ್ ಪಡೆ ಭಾರತೀಯ ಸೇನೆಯ ಕಾಲಾಳುಪಡೆಯಾಗಿದ್ದು ಅದು ಪ್ರಸ್ತುತ ಶ್ರೀನಗರದಲ್ಲಿದೆ. ಕಣಿವೆ ಭಾಗದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿ ಗರ್ಭಿಣಿಗೆ ಸಹಾಯ ಮಾಡುವ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದರು.

SCROLL FOR NEXT