ದೇಶ

ನಿರ್ಭಯಾ ಅಪರಾಧಿಗಳಿಗೆ ಗಲ್ಲುಶಿಕ್ಷೆ ಖಾಯಂ: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

Sumana Upadhyaya

ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅತ್ಯಾಚಾರಿಗಳ ಪೈಕಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಅವರು ತಿರಸ್ಕರಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಶಿಫಾರಸು ಮೇರೆಗೆ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ . ಗೃಹ ಸಚಿವಾಲಯದ ಶಿಫಾರಸು ಪ್ರಕಾರ, ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಕ್ಷಮಾದಾನ ಮನವಿಯನ್ನು ತಿರಸ್ಕರಿದ್ದು ಹಂತಕರಿಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಇದ್ದ ಅಡ್ಡಿ ಆತಂಕ ದೂರವಾಗಿದೆ.

ಮುಕೇಶ್ ಸಿಂಗ್ ಕೆಲ ದಿನಗಳ ಹಿಂದೆ ತನಗೆ ಕ್ಷಮಾದಾನ ನೀಡುವಂತೆ ಮನವಿ ಮಾಡಿಕೊಂಡಿದ್ದ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗುರುವಾರ ಈ ಮನವಿಯನ್ನು ಗೃಹ ಸಚಿವಾಲಯಕ್ಕೆ ರವಾನಿಸಿ ಮನವಿ ತಿರಸ್ಕರಿಸುವಂತೆ ಶಿಫಾರಸು ಮಾಡಿತ್ತು.

2012ರಲ್ಲಿ ದೆಹಲಿಯಲ್ಲಿ ಆರು ಮಂದಿ ಸೇರಿ ನಿರ್ಭಯಾ(ಹೆಸರು ಬದಲಿಸಲಾಗಿದೆ) ಮೇಲೆ ಅಮಾನುಷ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕೆಲ ದಿನಗಳ ಜೀವನ್ಮರಣ ಹೋರಾಟದ ಬಳಿಕ ಆಕೆ ದೂರದ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಎಲ್ಲಾ 6 ಮಂದಿಯನ್ನು ಬಂಧಿಸಿದ್ದರೂ ಒಬ್ಬ ಬಾಲಾಪರಾಧಿ ಎಂಬ ಕಾರಣಕ್ಕೆ ಆತನಿಗೆ ಬಾಲಾಪರಾಧ ನಿಯಮದ ಪ್ರಕಾರ ಶಿಕ್ಷೆಯಾಗಿ ಹೊರ ಬಂದಿದ್ದಾನೆ.

ರಾಮ್ ಸಿಂಗ್ ಎಂಬ ಪ್ರಮುಖ ಆರೋಪಿಯು ತಿಹಾರ್ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರಿಗೆ ಮರಣದಂಡನೆ ಶಿಕ್ಷೆ ಘೋಷಣೆಯಾಗಿದೆ. ಆದರೆ, ಮೇಲ್ಮನವಿ, ಕ್ಷಮಾದಾನ ಅರ್ಜಿಗಳ ಕಾರಣದಿಂದಾಗಿ ಅವರನ್ನು ಗಲ್ಲಿಗೇರಿಸುವುದು ತಡವಾಗಿದೆ. ದೆಹಲಿ ಹೈಕೋರ್ಟ್ ಈ ನಾಲ್ವರಿಗೆ ಈಗಾಗಲೇ ಡೆತ್ ವಾರೆಂಟ್ ಹೊರಡಿಸಿ ಇದೇ 22ರಂದು ನೇಣಿಗೇರಿಸಲು ಆದೇಶ ಮಾಡಿತ್ತು.

SCROLL FOR NEXT