ದೇಶ

ಕಾಶ್ಮೀರ ಬಿಕ್ಕಟ್ಟು: ಟ್ರಂಪ್ ಮಧ್ಯಸ್ತಿಕೆಯ ಆಹ್ವಾನ ತಿರಸ್ಕರಿಸಿದ ಭಾರತ

Lingaraj Badiger

ನವದೆಹಲಿ: ಕಾಶ್ಮೀರದ ಬಿಕ್ಕಟ್ಟು ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ಮೂರನೆಯವರ ಹಸ್ತಕ್ಷೇಪ, ಮಧ್ಯಸ್ತಿಕೆಗೆ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ, ಖಡಕ್ ಸಂದೇಶ ರವಾನಿಸಿದೆ.

ದಾವೋಸ್ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ಶೃಂಗಸಭೆಯಲ್ಲಿ ವಿಶೇಷ ಭಾಷಣದ ವೇಳೆ ಕಾಶ್ಮೀರದ ಬಿಕ್ಕಟ್ಟನ್ನು ಉಲ್ಲೇಖಿಸಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಕಾಶ್ಮೀರಕ್ಕೆ ಸಂಬಂಧಿಸಿದ ವಿಚಾರವನ್ನು ಅಮೆರಿಕ ಗಮನಿಸುತ್ತಿದೆ. ಅಲ್ಲದೆ, ಭಾರತ ಮತ್ತು ಪಾಕಿಸ್ತಾನ ಇಚ್ಛಿಸುವುದಾದರೆ ಕಾಶ್ಮೀರ ಬಿಕ್ಕಟ್ಟು ಬಗೆಹರಿಸಲು ಅಮೆರಿಕ ಸಹಾಯ ಮಾಡಲಿದೆ ಎಂಬ ಅಭಯ ನೀಡಿದ್ದರು.

ಡೊನಾಲ್ಡ್ ಟ್ರಂಪ್ ಆಫರ್ ಅನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಭಾರತ, ಕಾಶ್ಮೀರ ವಿಚಾರದಲ್ಲಿ ನಮ್ಮ ನಿಲುವು ಅಚಲವಾಗಿದ್ದು, ಮೂರನೆ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶ ಇಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಹೇಳಿದ್ದಾರೆ.

ಕಾಶ್ಮೀರದ ವಿಚಾರದಲ್ಲಿ ಅಮೆರಿಕದ ಸಹಾಯದ ಅವಶ್ಯಕತೆ ಭಾರತಕ್ಕೆ ಇಲ್ಲ. ಭಾರತ - ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಕಾಶ್ಮೀರ ಸಮಸ್ಯೆ ಪರಿಹರಿಸಿಕೊಳ್ಳಲಿವೆ ಎಂದು ಹೇಳುವ ಮೂಲಕ ಡೊನಾಲ್ಡ್ ಟ್ರಂಪ್ ಆಹ್ವಾನವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

SCROLL FOR NEXT