ದೇಶ

ದೇಶದ ಆರ್ಥಿಕತೆ ಮತ್ತೆ ಪುಟಿದೇಳಲಿದೆ- ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ 

Nagaraja AB

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತೀವ್ರ ಹೊಡೆತಕ್ಕೆ ಸಿಲುಕಿರುವ ದೇಶದ ಆರ್ಥಿಕತೆ ಶೀಘ್ರದಲ್ಲಿ ಮತ್ತೆ ಪುಟಿದೇಳಲಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊರೋನಾವೈರಸ್ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ದೇಶಾದ್ಯಂತ ಘೋಷಿಸಿದ್ದ ಲಾಕ್ ಡೌನ್ ಆರ್ಥಿಕ ಚಟುವಟಿಕೆ
ಮೇಲೆ ತೀವ್ರ ರೀತಿಯ ಪರಿಣಾಮವನ್ನುಂಟು ಮಾಡಿದ್ದು,, ಆರ್ಥಿಕ ಪ್ರಗತಿಗಾಗಿ ಆರ್ಥಿಕ ಪ್ಯಾಕೇಜ್ ನಂತಹ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.

ಎಫ್ ಐಸಿಸಿಐ ಫ್ರೇಮ್ಸ್ 2020 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತಾಬ್ ಕಾಂತ್,  ಭಾರತ ಮತ್ತೆ ಪುಟಿದೇಳುವಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದೇನೆ. ಆರ್ಥಿಕತೆಯಲ್ಲಿ ಪ್ರಗತಿಯ ಲಕ್ಷಣಗಳು ಗೋಚರಿಸುತ್ತಿವೆ. ಎಫ್ ಎಂಸಿಜಿ  (ಗ್ರಾಹಕ ಸರಕುಗಳ ವೇಗದ ಚಲನೆ)ದಂತಹ ಪ್ರಮುಖ ಕ್ಷೇತ್ರಗಳಲ್ಲಿ ಇದನ್ನು ಈಗಾಗಲೇ ನೋಡುತ್ತಿರುವುದಾಗಿ ತಿಳಿಸಿದರು.

ಆರ್ಥಿಕ ಚಟುವಟಿಕೆಯ ಕುಸಿತದಿಂದ ಸರ್ಕಾರದ ಆದಾಯದ ಸಂಗ್ರಹದಲ್ಲಿ ಇಳಿಕೆಯಾಗಿದೆ. ಆದಾಗ್ಯೂ, ಅನ್ ಲಾಕ್ ನಿಂದಾಗಿ ಆರ್ಥಿಕ ಚಟುವಟಿಕೆಗಳು ಪುನರ್ ಆರಂಭಗೊಳ್ಳುತ್ತಿವೆ.ಏಪ್ರಿಲ್ ನಲ್ಲಿ 32, 29 ಕೋಟಿಯಷ್ಟಿದ್ದ ಜಿಎಸ್ ಟಿ ಆದಾಯ ಸಂಗ್ರಹ ಮೇ ತಿಂಗಳಿನಲ್ಲಿ 62,009 ಕೋಟಿ ಹಾಗೂ ಜೂನ್ ತಿಂಗಳಲ್ಲಿ 90,917 ಕೋಟಿಗೆ ಜಿಗಿದಿದೆ ಎಂದರು.

ಸಾಂಕ್ರಾಮಿಕ ರೋಗ ಭಾರತಕ್ಕೆ ಮಾತ್ರ ಸವಾಲ್ ಆಗಿಲ್ಲ, ಅಮೆರಿಕಾ , ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಇಡೀ ವಿಶ್ವಕ್ಕೆ ಸವಾಲ್ ನೀಡಿದೆ. ಎಲ್ಲಾ ಬಿಕ್ಕಟ್ಟುಗಳು ಒಂದೊಂದು ಅವಕಾಶವಾಗಿದೆ. ಆದ್ದರಿಂದ , ಈ ಬಿಕ್ಕಟ್ಟು ಅಪಾರ ಪ್ರಮಾಣದಲ್ಲಿ ನಷ್ಟ ಹೊಂದಿದವರು ಮತ್ತು ವಿಜೇತರನ್ನು ಸಹ ಹೊಂದಲಿದೆ. ನಷ್ಟವಾಗಬೇಕಾ ಅಥವಾ ಗೆಲುವು ಪಡೆಯಬೇಕಾ ಎಂಬುದನ್ನು ಭಾರತ ಸಹ ನಿರ್ಧರಿಸಲಿದೆ ಎಂದು ಹೇಳಿದರು. 

ದೇಶದಲ್ಲಿನ 12ರಿಂದ 13 ಕ್ಷೇತ್ರಗಳು ಜಾಗತಿಕ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದು, ದೇಶದ ಪ್ರಗತಿಗೆ ಪ್ರಮುಖ ಕೊಡುಗೆ ನೀಡಲಿವೆ. ಮುಂದಿನ 10-12 ವರ್ಷಗಳಲ್ಲಿ ಈ ಕ್ಷೇತ್ರಗಳಲ್ಲಿ ಅಗಾದ ಪ್ರಮಾಣದ ಬೆಳವಣಿಗೆಯಾಗಲಿದ್ದು, ಅಪಾರ ಸಂಖ್ಯೆಯಲ್ಲಿ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂದು ಅಮಿತಾಭ್ ಕಾಂತ್ ಹೇಳಿದರು.

SCROLL FOR NEXT