ದೇಶ

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ನಾಳೆ ಕಾಂಗ್ರೆಸ್ ನಿಂದ ಮತ್ತೊಂದು ಸಭೆ, ಸಚಿನ್ ಪೈಲಟ್‌ಗೂ ಆಹ್ವಾನ

Srinivasamurthy VN

ಜೈಪುರ: ರಾಜಸ್ಥಾನದಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಆಡಳಿತಾ ರೂಡ ಕಾಂಗ್ರೆಸ್ ಪಕ್ಷ ನಾಳೆ ಮತ್ತೊಂದು ಸಭೆ ಕರೆದಿದ್ದು, ಸಭೆಗೆ ಹಾಜರಾಗುವಂತೆ ಬಂಡಾಯ ನಾಯಕ ಸಚಿನ್ ಪೈಲಟ್ ಅವರಿಗೂ ಆಹ್ವಾನ ನೀಡಿದೆ.

ಈ ಬಗ್ಗೆ ಸ್ವತಃ ಕಾಂಗ್ರೆಸ್ ವಕ್ತಾರ ರಣದೀಪ್‌ ಸುರ್ಜೆವಾಲಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಸಿಎಂ ಅಶೋಕ್‌ ಗೆಹ್ಲೋಟ್‌ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ 109 ಬಹುಮತ ಹೊಂದಿದೆ, ನಮ್ಮ ಎಲ್ಲ ಶಾಸಕರು ಬೆಂಬಲಿಸಿ ಪತ್ರ ನೀಡಿದ್ದಾರೆ. ನಮ್ಮ ಎಲ್ಲ ನಿಷ್ಠಾವಂತ ಶಾಸಕರು ಬಿಜೆಪಿ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ರಾಜಕೀಯ ಪರಿಸ್ಥಿತಿಯ ಸಂಬಂಧ ಚರ್ಚಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮತ್ತೊಂದು ಸಭೆ ನಾಳೆ ಬೆಳಿಗ್ಗೆ 10ಕ್ಕೆ ಕರೆಯಲಾಗಿದೆ. ಸಚಿನ್‌ ಪೈಲಟ್‌ ಹಾಗೂ ಎಲ್ಲ ಶಾಸಕರು ಹಾಜರಾಗುವಂತೆ ಕೇಳುತ್ತಿದ್ದೇವೆ. ಬರಹ ರೂಪದಲ್ಲಿಯೂ ಅವರಿಗೆ ತಿಳಿಸಲಾಗುತ್ತದೆ ಎಂದು ಹೇಳಿದರು.

ಅಂತೆಯೇ ರಾಜಸ್ಥಾನವನ್ನು ಸಮರ್ಥಗೊಳಿಸಲು ಹಾಗೂ ಒಟ್ಟಾಗಿ 8 ಕೋಟಿ ಜನರ ಸೇವೆ ಮಾಡುವ ಕುರಿತು ಚರ್ಚಿಸಲು ಬರುವಂತೆ ಶಾಸಕರನ್ನು ಕೋರಲಾಗಿದೆ. ಇಲ್ಲಿ ಯಾರೊಂದಿಗಾದರೂ ಯಾವುದೇ ಭಿನ್ನತೆ ಇದ್ದರೆ, ಅವರು ಮುಚ್ಚಿಟ್ಟುಕೊಳ್ಳದೆ ನೇರವಾಗಿ ಹೇಳಬೇಕು. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಎಲ್ಲರ ಮಾತುಗಳನ್ನೂ ಕೇಳಿ, ಪರಿಹಾರ ಕಂಡುಕೊಳ್ಳಲು ಸಿದ್ಧರಿದ್ದಾರೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ಇನ್ನು ಗೆಹ್ಲೂಟ್ ಸರ್ಕಾರದ ಪತನವನ್ನು ತಪ್ಪಿಸಲು ಕಾಂಗ್ರೆಸ್‌ನ ಕನಿಷ್ಠ 100 ಶಾಸಕರನ್ನು ರೆಸಾರ್ಟ್‌ಗೆ ಕರೆತರಲಾಗಿತ್ತು. ಜೈಪುರದಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದಲ್ಲಿ ಸಭೆಗೆ ಹಾಜರಾದ ಶಾಸಕರೊಂದಿಗೆ ಗೆಹ್ಲೋಟ್‌ ವಿಜಯದ ಚಿಹ್ನೆ ತೋರವ ಮೂಲಕ ಸರ್ಕಾರ ಸುಭದ್ರವಾಗಿದೆ ಎಂದು ಸೂಚಿಸಿದರು. ಪಕ್ಷ ಮಂಗಳವಾರ ಬೆಳಿಗ್ಗೆ 10ಕ್ಕೆ ಮತ್ತೊಂದು ಸಭೆ ಕರೆಯಲಾದಿದ್ದು, ಬಂಡಾಯ ಎದ್ದಿರುವ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ರನ್ನೂ ಆಹ್ವಾನಿಸಲಾಗಿದೆ. 

SCROLL FOR NEXT