ದೇಶ

ಕಾಂಗ್ರೆಸ್ ಗೆ ಪೂರ್ಣ ಅವಧಿಯ ಅಧ್ಯಕ್ಷರ ಅಗತ್ಯವಿದೆ: ನಾಯಕತ್ವ ಸಮಸ್ಯೆ ಬಗೆಹರಿಯಬೇಕಾಗಿದೆ- ಸಂದೀಪ್ ದೀಕ್ಷಿತ್

Nagaraja AB

ನವದೆಹಲಿ: ಕಾಂಗ್ರೆಸ್ ನಾಯಕತ್ವ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸಬೇಕಾಗಿದೆ. ಮಹತ್ವದ ಸಂದರ್ಭದಲ್ಲಿ ಪೂರ್ಣ ಅವಧಿಯ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿದೆ ಅಥವಾ ಚುನಾಯಿಸಬೇಕಾಗಿದೆ ಎಂದು ಪಕ್ಷದ ಮುಖಂಡ ಸಂದೀಪ್ ದೀಕ್ಷಿತ್ ಭಾನುವಾರ ಹೇಳಿದ್ದಾರೆ.

ಈ ವಿಚಾರವನ್ನು ಆದ್ಯತೆ ಮೇರೆಗೆ ಹಿರಿಯ ನಾಯಕರನ್ನೊಳಗೊಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಬಗೆಹರಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಮಧ್ಯಂತರ ಅಧ್ಯಕ್ಷರು ಇರುವುದರಿಂದ ಗುರಿಯೇ ಇಲ್ಲದಂತಾಗಿದ್ದು, ಜವಾಬ್ದಾರಿಯೊಂದಿಗೆ ಮುಂದುವರೆಯಬೇಕೆಂಬ ಭಾವನೆ ಕಾಡುತ್ತಿದೆ.ನಿರ್ದಿಷ್ಠ ವ್ಯಕ್ತಿಯ ಬಗ್ಗೆ ಒಲವು ಇಲ್ಲ, ರಾಹುಲ್ ಗಾಂಧಿ ಅಥವಾ ಯಾರನ್ನೇ ಆಗಲ್ಲಿ ಚುನಾಯಿಸಬೇಕು ಅಥವಾ ಆಯ್ಕೆ ಮಾಡಬೇಕು. ಆದರೆ,ಪ್ರಮುಖವಾದ ಸಂಗತಿ ಎಂದರೆ ಪಕ್ಷಕ್ಕೆ ಪೂರ್ಣ ಅವಧಿಯ ಅಧ್ಯಕ್ಷರ ಅಗತ್ಯವಿದೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದು ಇನ್ನೇನು ವರ್ಷವಾಗುತ್ತಿರುವಂತೆ ದೀಕ್ಷಿತ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆ ಹಾಗೂ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಬಂಡಾಯದ ವಿರುದ್ಧ ವಾಗ್ದಾಳಿ ನಡೆಸಿರುವ ದೀಕ್ಷಿತ್, ಇದು ಪಕ್ಷದಲ್ಲಿನ ಹಳೆಯ ಮತ್ತು ಯುವ ಪೀಳಿಗೆ ನಡುವಿನ ಹೋರಾಟವಲ್ಲ, ಆದರೆ, ದರೋಡೆಕೋರರು" ಮತ್ತು  ಕಠಿಣ ಪರಿಶ್ರಮದ ಮೂಲಕ ಪಕ್ಷದ ಬೆಳವಣಿಗಾಗಿ ಸತತ ಪ್ರಯತ್ನ ಮಾಡುವವರ ನಡುವಿನ ಹೋರಾಟವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಭಿನಂದನಾರ್ಹ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಆದರೆ, ಮಧ್ಯಂತರ ಅವಧಿಯಲ್ಲಿ ಧೀರ್ಘಕಾಲೀನ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ಮಹತ್ವದ ಸಂದರ್ಭದಲ್ಲಿ ಪೂರ್ಣ ಅವಧಿಯ ಅಧ್ಯಕ್ಷರು ನಮಗೆ ಅಗತ್ಯವಾಗಿದ್ದಾರೆ ಎಂದು  ಮಾಜಿ ಸಂಸದರು ಆಗಿರುವ 55 ವರ್ಷದ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.

SCROLL FOR NEXT