ದೇಶ

ಅಯೋಧ್ಯೆಯಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಸುದ್ದಿ ವಾಹಿನಿಗಳು ಅನುಮತಿ ಪಡೆಯುವುದು ಕಡ್ಡಾಯ: ಜಿಲ್ಲಾಡಳಿತ

Vishwanath S

ಅಯೋಧ್ಯೆ: ರಾಮ ಮಂದಿರ ಶಿಲಾನ್ಯಾಸ ಆಗಸ್ಟ್ 5 ರಂದು ನಡೆಯಲಿದ್ದು ಅಯೋಧ್ಯೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಸುದ್ದಿ ವಾಹಿನಿಗಳು ಅನುಮತಿ ಪಡೆಯಬೇಕು ಎಂದು ಅಯೋಧ್ಯೆ ಜಿಲ್ಲಾಡಳಿತ ತಿಳಿಸಿದೆ.

ಶಿಲಾನ್ಯಾಸ ಸಮಾರಂಭದ ವೇಳೆ ಉತ್ತರ ಪ್ರದೇಶದ ಅಯೋಧ್ಯೆಯಿಂದ ಸುದ್ದಿ ವಾಹಿನಿಗಳು ಚರ್ಚೆ ಅಥವಾ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದರೆ, ಈ ವೇಳೆ ಯಾವುದೇ ವ್ಯಕ್ತಿ ಅಥವಾ ಧರ್ಮದ ವಿರುದ್ಧ ಯಾವುದೇ ಪ್ರತಿಕ್ರಿಯೆಗಳು ಇರಬಾರದು ಎಂದು ತಿಳಿಸಲಾಗಿದೆ.

ಜಿಲ್ಲಾಡಳಿತ ಸಲಹೆ ಪ್ರಕಾರ, ಸುದ್ದಿ ವಾಹಿನಿಗಳು ಯಾವುದೇ ಕಾರ್ಯಕ್ರಮವನ್ನು ನಡೆಸಲು ಪೂರ್ವ ಅನುಮತಿ ಪಡೆಯಬೇಕು ಮತ್ತು ಅಧಿಕಾರಿಗಳಿಗೆ ತಮ್ಮ ಜವಾಬ್ದಾರಿಯನ್ನು ಸಲ್ಲಿಸಬೇಕು.

"ಕಾರ್ಯಕ್ರಮಗಳನ್ನು ನಡೆಸಲು ಮ್ಯಾಜಿಸ್ಟ್ರೇಟ್‌ನಿಂದ ಪೂರ್ವಾನುಮತಿ ಪಡೆಯಬೇಕಾಗಿರುವುದರಿಂದ ನಾವು ಸುದ್ದಿ ವಾಹಿನಿಗಳಿಗೆ ಸಲಹೆಯನ್ನು ನೀಡಿದ್ದೇವೆ, ಅವರಿಗೆ ಸೀಮಿತ ಸಂಖ್ಯೆಯ ಪ್ಯಾನಲಿಸ್ಟ್‌ಗಳಿಗೆ ಅವಕಾಶ ನೀಡಲಾಗುವುದು ಮತ್ತು ಯಾವುದೇ ಸಾರ್ವಜನಿಕ ಅಥವಾ ವೀಕ್ಷಕರಿಗೆ ಪ್ರಸಾರ ಅಥವಾ ಧ್ವನಿಮುದ್ರಣಕ್ಕೆ ಹಾಜರಾಗಲು ಅವಕಾಶವಿರುವುದಿಲ್ಲ ಎಂದು ಉಪ ನಿರ್ದೇಶಕರು, ಮಾಹಿತಿ ಮುರಳಿ ಧರ್ ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸುದ್ದಿ ವಾಹಿನಿಗಳ ನಡೆಸುವ ಕಾರ್ಯಕ್ರಮದಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸರನ್ನು ನಿಯೋಜಿಸಲಾಗುವುದು ಮತ್ತು ಪ್ಯಾನಲಿಸ್ಟ್‌ಗಳು ಮತ್ತು ಸುದ್ದಿ ವಾಹಿನಿ ಸಿಬ್ಬಂದಿ ಕೋವಿಡ್ 19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು.

ಯಾವುದೇ ಧರ್ಮ ಅಥವಾ ವ್ಯಕ್ತಿಯ ವಿರುದ್ಧ ಯಾವುದೇ ಪ್ರತಿಕ್ರಿಯೆಗಳು ಹೊರಬರದಂತೆ ಸುದ್ದಿ ವಾಹಿನಿಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಅಯೋಧ್ಯ ವಿವಾದ ಪ್ರಕರಣ ಸಂಬಂಧ ಯಾವುದೇ ರಾಜಕೀಯ ಪಕ್ಷದವರನ್ನು ಆಹ್ವಾನಿಸಬಾರದು ಎಂದು ಸಿಂಗ್ ಹೇಳಿದರು.

ಆಗಸ್ಟ್ 5ರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ.

SCROLL FOR NEXT