ದೇಶ

120 ಕಿ.ಮೀ ವೇಗದಲ್ಲಿ ಮುಂಬೈಗೆ ಅಪ್ಪಳಿಸಲಿದೆ ನಿಸರ್ಗ ಚಂಡಮಾರುತ, ಕೇವಲ 12 ವಿಮಾನಗಳ ಹಾರಾಟಕ್ಕೆ ಅವಕಾಶ

Manjula VN

ಮುಂಬೈ; ಕೊರೋನಾ ವೈರಸ್ ಹಾವಳಿಯಿಂದ ಅತೀ ಹೆಚ್ಚು ಬಾಧಿತವಾಗಿರುವ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ಚಂಡಮಾರುತ ಆಘಾತ ಎದುರಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ನಿಸರ್ಗ ಹೆಸರಿನ ಚಂಡಮಾರುತ ಗಂಟೆಗೆ 120 ಕಿಮೀ ವೇಗದಲ್ಲಿ ಮಹಾರಾಷ್ಟ್ರ ಗುಜರಾತ್ ಕರಾವಳಿಗೆ ಬುಧವಾರ ಮಧ್ಯಾಹ್ನ ಅಪ್ಪಳಿಸಲಿದೆ. 

ಮುಂಬೈ ಸನಿಹವೇ ಈ ಚಂಡಮಾರುತ ಹಾದುಹೋಗಲಿದ್ದು, 100 ವರ್ಷಗಳಲ್ಲಿ ಇದೇ ಮೊದಲ ಬಾರಿದೆ ದೇಶದ ವಾಣಿಜ್ಯ ರಾಜಧಾನಿ ಚಂಡಮಾರುತವೊಂದಕ್ಕೆ ತುತ್ತಾಗುತ್ತಿದೆ. 

ಚಂಡಮಾರುತದ ಪ್ರಭಾವದಿಂದ ಮಹಾರಾಷ್ಟ್ರ, ಗುಜರಾತ್, ಗೋವಾ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಮುಂಬೈ ಸೇರಿ ಮಹಾರಾಷ್ಟ್ರದ 8 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

ಗುಜರಾತ್ ನಲ್ಲಿ 78 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಎರಡೂ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 13 ತಂಡಗಳನ್ನು ನಿಯೋಜಿಸಲಾಗಿದೆ. 

ಚಂಡ ಮಾರುತ ಹಿನ್ನೆಲೆಯಲ್ಲಿ ಜನತೆ ಇನ್ನೆರಡು ದಿನಗಳ ಕಾಲ ಮನೆಗಳಲ್ಲಿಯೇ ಇರುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ. 

100ಕಿಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸಲಿದೆ. ಚಂಡಮಾರುತ ದುರ್ಬಲಗೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತಿದ್ದೇವೆ. ಆದರೆ, ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ನಮ್ಮ ಕರಾವಳಿ ಭಾಗದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನಿಸುತ್ತಿದೆ. ಸೇನೆ, ವಾಯುಪಡೆ, ಹಾಗೂ ನೌಕಾಪಡೆಗಳನ್ನು ಈಗಾಗಲೇ ನಿಯೋಜನೆಗೊಳಿಸಲಾಗಿದ್ದು, ಜೂನ್. 3 ರಂದು ಕೇವಲ 12 ವಿಮಾನಗಳಿಗಷ್ಟೇ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ಚಂಡಮಾರುತದ ಪರಿಣಾಮ ತಗ್ಗಿಸುವತ್ತವಷ್ಟೇ ನಮ್ಮ ಗಮನವಿದೆ ಎಂದು ಠಾಕ್ರೆ ತಿಳಿಸಿದ್ದಾರೆ. 

SCROLL FOR NEXT