ದೇಶ

ಭೂತಾನ್ ಜೊತೆ ಯಾವುದೇ ಸಂಘರ್ಷವಿಲ್ಲ: ಅಸ್ಸಾಂ ಸರ್ಕಾರ

Srinivasamurthy VN

ದಿಸ್ಪುರ್: ಭೂತಾನ್ ಜೊತೆ ಯಾವುದೇ ರೀತಿಯ ಸಂಘರ್ಷವಿಲ್ಲ ಎಂದು ಅಸ್ಸಾಂ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಸ್ಸಾಂ ಸರ್ಕಾರ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣಾ ಅವರು, ಭೂತಾನ್ ಸರ್ಕಾರ ಅಸ್ಸಾಂಗೆ ಕುಡಿಯುವ ನೀರು ಬಂದ್ ಮಾಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಭೂತಾನ್ ನಿಂದ ಅಸ್ಸಾಂಗೆ ಹರಿಯುವ ನೀರಾವರಿ ನೀರಿನ ಕಾಲುವೆಗಳಲ್ಲಿ ಕಲ್ಲುಗಳು ತುಂಬಿದ್ದು, ಇದರಿಂದ ನೀರಿನ ಹರಿವು ನಿಂತಿದೆ. ಈ ಕಲ್ಲುಗಳನ್ನು ತೆರವು ಮಾಡುವಂತೆ ಭೂತಾನ್ ಸರ್ಕಾರ ಸಲಹೆ ನೀಡಿದೆ. ಈ ಕುರಿತಂತೆ ಅಸ್ಸಾಂ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಕಾಲುವೆಗಳಲ್ಲಿರುವ ಕಲ್ಲುಗಳನ್ನು ತೆಗೆದು ನೀರಿನ ಸುಗಮ ಹಿರಿವಿಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ಭೂತಾನ್ ದೇಶ ಗಡಿ ಹಂಚಿಕೊಂಡಿದೆ. ಹೀಗಾಗಿ ಉಭಯ ದೇಶಗಳ ನಡುವೆ ನದಿ ನೀರಿನ ಕಾಲುವೆ ಇದ್ದು, ಭೂತಾನ್ ನಿಂದ ಅಸ್ಸಾಂಗೆ ನೀರು ಹರಿಯುತ್ತದೆ. ಈ ಕಾಲುವೆಗಳಲ್ಲಿ ನೀರಿನ ಹರಿವು ನಿಂತಿದೆ ನಿಜ. ಆದರೆ ಭೂತಾನ್ ಸರ್ಕಾರ ಉದ್ದೇಶಪೂರ್ವಕವಾಗಿ ನೀರು ನಿಲ್ಲಿಸಿಲ್ಲ. ಬದಲಿಗೆ ಕಾಲುವೆಗಳಲ್ಲಿರುವ ಕಲ್ಲುಗಳಿಂದಾಗಿ ನೀರಿನ ಹರಿವು ನಂತಿದೆ. ಈ ಬಗ್ಗೆ ಭೂತಾನ್ ಸರ್ಕಾರ ನಮ್ಮೊಂದಿಗೆ ಚರ್ಚಿಸಿದೆ. ಶೀಘ್ರದಲ್ಲೇ ಕಾಲುವೆಗಳಲ್ಲಿರುವ ಕಲ್ಲುಗಳನ್ನು ತೆಗೆದು ಸುಗಮ ನೀರಿನ ಹರಿವಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಅಲ್ಲದೆ ಈ ಕುರಿತ ಮಾಧ್ಯಮಗಳ ಸುದ್ದಿಗಳಲ್ಲಿ ಹುರುಳಿಲ್ಲ. ಭಾರತ ಮತ್ತು ಭೂತಾನ್ ನಡುವಿನ ಬಾಂಧ್ಯವ್ಯ ಉತ್ತಮವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿ ಮಾಡಿರುವ ಈ ಕಪೋಲಕಲ್ಪಿತ ಸುದ್ದಿಗಳು ಭೂತಾನ್ ಮತ್ತು ಅಸ್ಸಾಂ ನಡುವಿನ ಸ್ನೇಹಮಯ ಸಂಬಂಧಕ್ಕೆ ತೊಡಕಾಗುತ್ತವೆ ಎಂದು ಎಂದು ಕುಮಾರ್ ಸಂಜಯ್ ಕೃಷ್ಣಾ ಆತಂಕ ವ್ಯಕ್ತಪಡಿಸಿದರು.

SCROLL FOR NEXT