ದೇಶ

ಉನ್ನಾವೋ ಅತ್ಯಾಚಾರ: ಸಂತ್ರಸ್ಥೆಯ ತಂದೆ ಹತ್ಯೆ ಪ್ರಕರಣದಲ್ಲೂ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ದೋಷಿ!

Srinivasamurthy VN

ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಗೆ ಮತ್ತೊಂದು ಪ್ರಕರಣದಲ್ಲೂ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.

ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯ ತಂದೆ ಸಾವಿನ ಪ್ರಕರಣದಲ್ಲೂ ಕುಲದೀಪ್ ಸೆಂಗಾರ್ ಅಪರಾಧಿ ಎಂದು ದೆಹಲಿಯ ತೀಸ್ ಹಜಾರಿ ಕೋರ್ಟ್ ಇಂದು ತೀರ್ಪು ನೀಡಿದೆ. 2018ರ ಏಪ್ರಿಲ್ 9ರಂದು ಪೊಲೀಸ್‌ ಕಸ್ಟಡಿಯಲ್ಲಿ ಸಂತ್ರಸ್ತೆಯ ತಂದೆ ಶಂಕಾಸ್ಪದವಾಗಿ ಸಾವನ್ನಪ್ಪಿದ್ದರು. ಇದಕ್ಕೂ 2 ದಿನ ಮುಂಚೆ ಸಂತಸ್ತೆಯ ತಂದೆ ತನ್ನ ಸಹೋದ್ಯೋಗಿಗಳೊಂದಿಗೆ ತಮ್ಮ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಶಶಿ ಪ್ರತಾಪ್ ಸಿಂಗ್ ಎಂಬಾತ ಇವರ ಬಳಿ ಬಂದು ಲಿಫ್ಟ್ ಕೇಳಿದ್ದಾರೆ. ಅದಕ್ಕೆ ಸಂತ್ರಸ್ಥೆಯ ತಂದೆ ಒಪ್ಪದಿದ್ದಾಗ ಆತ ಕುಲದೀಪ್ ಸೆಂಗಾರ್ ಅವರ ತಮ್ಮ ಅಟುಲ್ ಮತ್ತು ಆತನ ಸಹಚರರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ.

ಎಲ್ಲರೂ ಸೇರಿ ಸಂತ್ರಸ್ಥೆಯ ತಂದೆಯನ್ನು ಮನಸೋ ಇಚ್ಛೆ ಥಳಿಸಿದ್ದರು. ಈ ವೇಳೆ ಸ್ಥಳಕ್ಕಾಗಿಮಿಸಿದ್ದ ಪೊಲೀಸರು ಹಲ್ಲೆಗೊಳಗಾಗಿದ್ದ ಸಂತ್ರಸ್ಥೆ ತಂದೆಯನ್ನು ಆಸ್ಪತ್ರೆಗೆ ಸಾಗಿಸುವ ಬದಲು ಠಾಣೆಗೆ ಕರೆದೊಯಿದ್ದರು. ಇದಾಗಿ 2 ದಿನಗಳ ಬಳಿಕ ಅಂದರೆ ಏಪ್ರಿಲ್ 9ರಂದು ಅವರು ಠಾಣೆಯಲ್ಲೇ ನಿಗೂಢವಾಗಿ ಮೃತಪಟ್ಟಿದ್ದರು. ಅಟುಲ್ ಸೆಂಗಾರ್ ಮತ್ತು ಆತನ ಸಹಚರರು ಸಂತ್ರಸ್ತೆಯ ತಂದೆ ಮೇಲೆ ದಾಳಿ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇದಾದ ಬಳಿಕ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲದೀಪ್ ಸೆಂಗಾರ್, ಆತನ ಸಹೋದರ ಅಟುಲ್ ಸೆಂಗಾರ್, ಪೊಲೀಸ್ ಠಾಣಾ ಇನ್ ಚಾರ್ಜ್ ಆಗಿದ್ದ ಅಶೋಕ್ ಸಿಂಗ್ ಭಡೌರಿಯಾ, ಸಬ್ ಇನ್ಸ್ ಪೆಕ್ಟರ್ ಕಮ್ಟಾ ಪ್ರಸಾದ್, ಪೇದೆ ಅಮೀರ್ ಖಾನ್ ಸೇರಿದಂತೆ ಇತರೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.ಇದೀಗ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡು ದೆಹಲಿಯ ತೀಸ್ ಹಜಾರಿ ಕೋರ್ಟ್ ತೀರ್ಪು ನೀಡಿದ್ದು, ಕುಲದೀಪ್ ಸೆಂಗಾರ್ ಅಪರಾಧಿ ಎಂದು ಹೇಳಿದೆ. ಅಲ್ಲದೆ ಈ ಪ್ರಕರಣದ ಇತರೆ ನಾಲ್ಕು ಆರೋಪಿಗಳನ್ನು ಪ್ರಕರಣದಿಂದ ವಜಾ ಮಾಡಿದೆ.

SCROLL FOR NEXT