ದೇಶ

ಸಾಮಾಜಿಕ ಅಶಾಂತಿ, ಆರ್ಥಿಕ ಹಿಂಜರಿತ, ಕೊರೋನಾ ದೇಶವನ್ನುಅಪಾಯಕ್ಕೆ ತಳ್ಳಲಿವೆ- ಮನಮೋಹನ್ ಸಿಂಗ್ ಕಳವಳ

Nagaraja AB

ನವದೆಹಲಿ: ಸಾಮಾಜಿಕ  ಅಶಾಂತಿ, ಆರ್ಥಿಕ  ಹಿಂಜರಿತ  ಹಾಗೂ ಕೊರೋನಾ ಸಾಂಕ್ರಾಮಿಕ ಎಂಬ ಮೂರು  ಪೆಡಂಭೂತಗಳು ದೇಶವನ್ನು ತೀವ್ರ  ಅಪಾಯಕ್ಕೆ ತಳ್ಳುವ  ಸಾಧ್ಯತೆಗಳಿವೆ  ಎಂದು ಮಾಜಿ ಪ್ರಧಾನಿ  ಡಾ. ಮನಮೋಹನ್ ಸಿಂಗ್  ಕಳವಳ ವ್ಯಕ್ತಪಡಿಸಿದ್ದಾರೆ

ಉದ್ದೇಶ ಪೂರ್ವಕವಾಗಿ  ಭುಗಿಲೆಬ್ಬಿಸಿದ  ಕೋಮು ಉದ್ವಿಗ್ನತೆ, ದೇಶದ ಆರ್ಥಿಕತೆಯ ಅತಿ  ಕೆಟ್ಟ ನಿರ್ವಹಣೆ ಹಾಗೂ  ಬಾಹ್ಯ ಆರೋಗ್ಯ ಆಘಾತ ಭಾರತದ  ಪ್ರಗತಿ  ಹಾಗೂ  ಅದರ  ನಿಲುವನ್ನು ಹದಗೆಡಿಸುವ ಅಪಾಯವನ್ನುಂಟುಮಾಡಲಿದೆ  ಎಂದು  ಮಾಜಿ ಪ್ರಧಾನಿ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ  ಭಾಷಣಗಳಿಂದ ಮಾತ್ರವಲ್ಲ ಕ್ರಿಯೆಗಳಿಂದ  ರಾಷ್ಟ್ರಕ್ಕೆ  ಸೂಕ್ತ   ಮನವರಿಕೆ ಮಾಡಬೇಕು, ದೇಶ  ಎದುರಿಸುತ್ತಿರುವ ಅಪಾಯಗಳ  ಬಗ್ಗೆ ಅವರಿಗೆ  ಅರಿವಿದೆ. ದೇಶಕ್ಕೆ ಧೈರ್ಯ ತುಂಬುವ ಮೂಲಕ, ಸಾಧ್ಯವಾದಷ್ಟು  ದೇಶ  ಸರಾಗವಾಗಿ  ಈ ಸಂಕಷ್ಟಗಳನ್ನು ಪಾರಾಗಲು  ಸಹಾಯ ಮಾಡಬಹುದು ಎಂದು ಕಾಂಗ್ರೆಸ್ ನಾಯಕ  ಮನಮೋಹನ್  ಸಿಂಗ್    ಸಲಹೆ ನೀಡಿದ್ದಾರೆ.

ದೆಹಲಿ ಗಲಭೆಗಳ ಬಗ್ಗೆ ವ್ಯಾಪಕವಾಗಿ  ಪ್ರಸ್ತಾಪಿಸಿರುವ  ಮಾಜಿ ಪ್ರಧಾನಿ,   ೫೩  ಮಂದಿ   ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರಾಜಕೀಯ ವರ್ಗ ಸೇರಿದಂತೆ  ಸಮಾಜದ   ವಿಚ್ಛಿದ್ರಕಾರಕ ಶಕ್ತಿಗಳು  ಕೋಮು ಉದ್ವಿಗ್ನತೆ  ಸೃಷ್ಟಿಸಿ  ಧಾರ್ಮಿಕ  ಅಸಹಿಷ್ಣುತೆಯನ್ನು    ಧಗಧಗಿಸುವಂತೆ   ಮಾಡಿವೆ  ಎಂದು  ಡಾ. ಮನಮೋಹನ್ ಸಿಂಗ್  ಆರೋಪಿಸಿದ್ದಾರೆ
 
ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳು, ಸಾರ್ವಜನಿಕ ಸ್ಥಳಗಳು  ಹಾಗೂ   ಖಾಸಗಿ ಮನೆಗಳು  ದೇಶದ  ಇತಿಹಾಸದ ಕರಾಳ ದಿನಗಳನ್ನು  ನೆನಪಿಸುವಂತಹ ಕೋಮು ಹಿಂಸಾಚಾರ ಭೀತಿ  ಎದುರಿಸುತ್ತಿವೆ, ಕಾನೂನು ಮತ್ತು ಸುವ್ಯವಸ್ಥೆ ಜಾರಿ ಸಂಸ್ಥೆಗಳು ನಾಗರಿಕರನ್ನು  ರಕ್ಷಿಸುವ ತಮ್ಮ ಧರ್ಮವನ್ನು  ತ್ಯಜಿಸಿವೆ. ನ್ಯಾಯ ಸಂಸ್ಥೆಗಳು  ಹಾಗೂ  ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿರುವ   ಮಾಧ್ಯಮವೂ  ಸಹ  ನಮ್ಮನ್ನು ವಿಫಲಗೊಳ್ಳುವಂತೆ  ಮಾಡಿವೆ  ಎಂದು ಮನಮೋಹನ್  ಸಿಂಗ್  ಕಳವಳ ವ್ಯಕ್ತಪಡಿಸಿದ್ದಾರೆ. 

ಸಾಮಾಜಿಕ ಉದ್ವಿಗ್ನತೆ   ದೇಶಾದ್ಯಂತ  ವೇಗವಾಗಿ  ಹಬ್ಬುತ್ತಿದೆ, ಭಾರತದ ಆತ್ಮವನ್ನು ಸುಡುವ  ಅಪಾಯ ಕಂಡುಬರುತ್ತಿದೆ. ಆ ಆತ್ಮವನ್ನು ಬೆಳಗಿಸಿದ  ಜನರು  ಮಾತ್ರವೇ  ಬೆಂಕಿಯನ್ನು ನಂದಿಸಲು ಸಾಧ್ಯ  ಎಂದು   ಡಾ. ಮನಮೋಹನ್  ಸಿಂಗ್  ಹೇಳಿದ್ದಾರೆ. 

 ಕೆಲವು  ವರ್ಷಗಳ  ಹಿಂದೆ  ತನ್ನ ಉದಾರವಾದಿ ಪ್ರಜಾಪ್ರಭುತ್ವ ವಿಧಾನಗಳ ಮೂಲಕ  ಭಾರತ   ಆರ್ಥಿಕ ಅಭಿವೃದ್ಧಿಗೆ ಮಾದರಿಯಾಗಿತ್ತು. ಭಾರಿ  ಬಹುಮತದ  ಹೊಂದಿರುವ ಸರ್ಕಾರ ಆರ್ಥಿಕ ಹತಾಶೆಯತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

SCROLL FOR NEXT