ನವದೆಹಲಿ: ಕಳೆದ ವರ್ಷ ಅಕ್ಟೋಬರ್ 24ರಂದು ತನ್ನ ತೀರ್ಪಿನಲ್ಲಿ ನಿಗದಿಪಡಿಸಿದ್ದ ಎಜಿಆರ್ ಶುಲ್ಕ ಬಾಕಿ ಪಾವತಿ ಬಗ್ಗೆ ಸ್ವಯಂ ಮೌಲ್ಯಮಾಪನ ಅಥವಾ ಮರು ಮೌಲ್ಯಮಾಪನ ಮಾಡಿರುವ ಕೇಂದ್ರ ಸರ್ಕಾರ ಮತ್ತು ಟೆಲಿಕಾಂ ಕಂಪೆನಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆ ತೆಗೆದುಕೊಂಡಿದೆ.
ಎಜಿಆರ್ ಶುಲ್ಕದ ಬಗ್ಗೆ ಪತ್ರಿಕೆಯಲ್ಲಿ ಆಗಾಗ ಲೇಖನಗಳು, ಸುದ್ದಿಗಳು ಪ್ರಕಟವಾಗುವ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಟೆಲಿಕಾಂ ಕಂಪೆನಿಗಳ ಎಲ್ಲಾ ವ್ಯವಸ್ಥಾಪಕ ನಿರ್ದೇಶಕರು ಇದಕ್ಕೆ ವೈಯಕ್ತಿಕ ಜವಾಬ್ದಾರರಾಗಿದ್ದು ಇನ್ನು ಮುಂದೆ ಇಂತಹ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾದರೆ ನ್ಯಾಯಾಂಗ ನಿಂದನೆ ಕೇಸು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಟೆಲಿಕಾಂ ಕಂಪೆನಿಗಳಿಗೆ ಎಜಿಆರ್ ಶುಲ್ಕವನ್ನು ಪಾವತಿಸಲು 20 ವರ್ಷ ಕಾಲಾವಕಾಶ ನೀಡಿ ಎಂದು ಕೇಂದ್ರ ಸರ್ಕಾರ ಸಲ್ಲಿಸಿದ ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್ ಎ ನಜೀರ್, ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ, ಎರಡು ವಾರಗಳ ನಂತರ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದಿದೆ.