ದೇಶ

ಈಗ ಸಾವು-ಬದುಕಿನ ಹೋರಾಟದಲ್ಲಿದ್ದೇವೆ; ಕೇಂದ್ರ ಸರ್ಕಾರದ ಆದೇಶ ಪಾಲಿಸಬೇಕು: ಒಮರ್ ಅಬ್ದುಲ್ಲಾ

Srinivasamurthy VN

ಶ್ರೀನಗರ: ಈಗ ನಾವೆಲ್ಲರೂ ಸಾವು-ಬದುಕಿನ ಹೋರಾಟದಲ್ಲಿದ್ದೇವೆ. ಹೀಗಾಗಿ ನಾವು ಕೇಂದ್ರ ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ಧತಿ ಬಳಿಕ ಗೃಹ ಬಂಧನಕ್ಕೊಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು 7 ತಿಂಗಳ ಬಳಿಕ ಬಿಡುಗಡೆಯಾಗಿದ್ದು, ಬಿಡುಗಡೆ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಕಿತ್ತುಕೊಳ್ಳಲಾಗಿದೆ. ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಪರಿ ಸರಿಯಿಲ್ಲ. ತಿಂಗಳಕಾಲ ಮಕ್ಕಳು ಶಾಲೆಗೆ ಹೋಗಿಲ್ಲ. ರಾಜ್ಯದಲ್ಲಿನ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಮುಚ್ಚಿ ನಷ್ಟ ಅನುಭವಿಸುವಂತಾಯಿತು ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮ ಮುಂದಿನ ಹೋರಾಟದ ಕುರಿತು ಮಾತನಾಡಿದ ಒಮರ್ ಅಬ್ದುಲ್ಲಾ ಅವರು, ಪ್ರಸ್ತುತ ನಾವು ನಾವೆಲ್ಲರೂ ಸಾವು-ಬದುಕಿನ ಹೋರಾಟದಲ್ಲಿದ್ದೇವೆ. ಮಾರಕ ಕೊರೋನಾ ವೈರಸ್ ಹರಡದಂತೆ ಕ್ರಮ ಕೈಗೊಳ್ಳಬೇಕು. ಹೀಗಾಗಿ ನಾವು ಕೇಂದ್ರ ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಮೇಲೆ ನಾನು ಕಳೆದ 9 ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಬೆಳವಣಿಗೆಗಳ ಕುರಿತು ಮಾತನಾಡುತ್ತೇನೆ. ಮೊದಲು 370 ವಿಧಿ ರದ್ಧತಿ ವೇಳೆ ಬಂಧಿತರಾಗಿದ್ದ ನಮ್ಮ ಎಲ್ಲ ಹೋರಾಟಗಾರರೂ ಬಿಡುಗಡೆಯಾಗಬೇಕು ಎಂದು ಹೇಳಿದರು.

2019 ಆಗಸ್ಟ್ 5 ರಂದು 370 ವಿಧಿ ರದ್ದುಗೊಳ್ಳುತ್ತಿದ್ದಂತೆಯೇ ಒಮರ್ ವಿರುದ್ಧ ಸಾರ್ವಜನಿಕ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸತತ 7 ತಿಂಗಳ ಕಾಲ ಒಮರ್ ಅಬ್ದುಲ್ಲಾ ಅವರು ಗೃಹ ಬಂಧನದಲ್ಲಿದ್ದರು.  ಒಮರ್ ಅಬ್ದುಲ್ಲಾ ಅವರ ಗೃಹ ಬಂಧನ ಪ್ರಶ್ನಿಸಿ ಸಾರಾ ಅಬ್ದುಲ್ಲಾ ಪೈಲಟ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಹೋದರನ ಬಂಧನವು ವಾಕ್ ಸ್ವಾತಂತ್ರ್ಯ ಸೇರಿದಂತೆ ಸಾಂವಿದಾನಿಕ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಇದು ಎಲ್ಲಾ ರಾಜಕೀಯ ಪ್ರತಿಸ್ಪರ್ಧಿಗಳನ್ನು ನಿಯಂತ್ರಿಸುವ ಸ್ಥಿರ ಮತ್ತು ಸಂಘಟಿತ ಪ್ರಯತ್ನದ ಭಾಗವಾಗಿದೆ ಎಂದು ಹೇಳಿದ್ದರು. ಅಲ್ಲದೆ, ಕೂಡಲೇ ಸಹೋದರನನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್'ಗೆ ಮನವಿ ಮಾಡಿದ್ದರು. 

SCROLL FOR NEXT