ದೇಶ

ಲಾಕ್ ಡೌನ್ ಎಫೆಕ್ಟ್: ಆಭರಣ ಮಾರುವ ಕೈಗಳಿಂದ ತರಕಾರಿ ಮಾರಾಟ!

Lingaraj Badiger

ಜೈಪುರ್:  ಕಳೆದ 25 ವರ್ಷಗಳಿಂದ ಆಭರಣ ವ್ಯಾಪಾರಿಯಾಗಿದ್ದ ರಾಜಸ್ಥಾನದ ಹುಕುಮಚಂದ್ ಸೋನಿ ಅವರು ತಾನು ಜೀವನದಲ್ಲಿ ತರಕಾರಿ ಮಾರಿ ಜೀವನ ನಡೆಸಬೇಕಾದ ಸಮಯ ಬರುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ. ಆದರೆ ಕೊವಿಡ್-19 ಲಾಕ್ ಡೌನ್ ಆಭರಣ ವ್ಯಾಪ್ಯಾರಿಯನ್ನೂ ಬೀದಿಗೆ ತಂದು ನಿಲ್ಲಿಸಿದ್ದು, ಸೋನಿ ಅವರು ಜೀವನಕ್ಕಾಗಿ ಈಗ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಅತ್ಯಂತ ಬೆಲೆ ಬಾಳುವ ಆಭರಣಗಳಿಂದ ತುಂಬಿರುತ್ತಿದ್ದ ಸೋನಿ ಅವರ ಅಂಗಡಿಯಲ್ಲಿ ಈಗ ತರಕಾರಿ ತುಂಬಿಕೊಂಡಿದೆ. ಆಭರಣ ತೂಗುತ್ತಿದ್ದ ಮಷಿನ್ ಈಗ ತರಕಾರಿ ತೂಗುತ್ತಿದೆ.

ಜೈಪುರದ ರಾಮ್ ನಗರದಲ್ಲಿರುವ ಜಿಪಿ ಆಭರಣ ಮಳಿಗೆ ಈಗ ತರಕಾರಿ ಅಂಗಡಿಯಾಗಿ ಮಾರ್ಪಟ್ಟಿದ್ದು, ಕಳೆದ ನಾಲ್ಕು ದಿನಗಳಿಂದ ನಾನು ತರಕಾರಿ ಮಾರಾಟ ಮಾಡುತ್ತಿದ್ದೇನೆ. ಲಾಕ್ ಡೌನ್ ಸಂದರ್ಭದಲ್ಲಿ ಜೀವನ ನಡೆಸಲು ನನಗೆ ಇರುವ ಒಂದೇ ಮಾರ್ಗ ಇದು ಎಂದು ಸೋನಿ ಅವರು ಹೇಳಿದ್ದಾರೆ.

ನಾನು ಆಭರಣ ವ್ಯಾಪಾರದಿಂದ ಹೆಚ್ಚು ಉಳಿತಾಯ ಮಾಡಿರಲಿಲ್ಲ. ಹೀಗಾಗಿ ಜೀವನಕ್ಕಾಗಿ ತರಕಾರಿ ವ್ಯಾಪಾರ ಆರಂಭಿಸಿದ್ದೇನೆ. ನನ್ನ ಆಭರಣ ಅಂಗಡಿ ಅಷ್ಟೊಂದು ದೊಡ್ಡದಾಗಿರಲಿಲ್ಲ. ಆದರೆ ನನ್ನ ಕುಟುಂಬ ನಿರ್ವಹಣೆಗೆ ಅದು ಸಾಕಾಗುತ್ತಿತ್ತು ಎಂದು ಸೋನಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಮಾರ್ಚ್ 25ರಂದು ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಯಿತು. ಅಗತ್ಯ ವಸ್ತುಗಳನ್ನು ಬಿಟ್ಟು ಇತರೆ ಎಲ್ಲಾ ವ್ಯಾಪಾರಗಳನ್ನು ಬಂದ್ ಮಾಡಲಾಗಿದೆ. ಲಾಕ್ ಡೌನ್ ನಂತರ ಕೆಲವು ವಾರಗಳ ಕಾಲ ತನ್ನ ಕುಟುಂಬ ನಿರ್ವಹಣೆ ಮಾಡಿದ್ದ ಸೋನಿ ಅವರಿಗೆ ಈಗ ಜೀವನಕ್ಕಾಗಿ ಬೇರೆ ದಾರಿ ಕಂಡುಕೊಳ್ಳುವುದು ಅನಿವಾರ್ಯವಾಯಿತು ಎಂದಿದ್ದಾರೆ.

SCROLL FOR NEXT