ದೇಶ

ಕಾಲ್ನಡಿಗೆ ಮೂಲಕ ಹೋಗುವ ವಲಸೆ ಕಾರ್ಮಿಕರ ಆಹಾರ, ಆಶ್ರಯ ಬಗ್ಗೆ ಸರ್ಕಾರಗಳೇ ತೀರ್ಮಾನಿಸಲಿ: ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ: ಊರಿಗೆ ಹೊರಟ ವಲಸೆ ಕಾರ್ಮಿಕರಿಗೆ ಆಹಾರ, ಆಶ್ರಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ವಲಸೆ ಕಾರ್ಮಿಕರಲ್ಲಿ ಯಾರು ನಡೆದುಕೊಂಡು ಹೋಗುತ್ತಾರೆ, ಯಾರು ನಡೆದುಕೊಂಡು ಹೋಗುವುದಿಲ್ಲ ಎಂದು ನಿಗಾವಹಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.

ಈ ಬಗ್ಗೆ ರಾಜ್ಯಗಳೇ ತೀರ್ಮಾನ ಮಾಡಲಿ. ಅದನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ತೀರ್ಮಾನಿಸುವುದು ಏನಿದೆ ಎಂದು ಕೇಳಿದೆ.

ಅಡ್ವೊಕೇಟ್ ಅಲಖ್ ಅಲೋಕ್ ಶ್ರೀವಾಸ್ತವ ಅರ್ಜಿ ಸಲ್ಲಿಸಿ, ನಡೆದುಕೊಂಡು ಹೋಗುವ ವಲಸೆ ಕಾರ್ಮಿಕರನ್ನು ಗುರುತಿಸಿ ಅವರಿಗೆ ಆಹಾರ ಮತ್ತು ಆಶ್ರಯ ನೀಡಲು ಸರ್ಕಾರಕ್ಕೆ ಆದೇಶ ನೀಡಬೇಕೆಂದು ಒತ್ತಾಯಿಸಿದ್ದರು.ಇತ್ತೀಚೆಗೆ ಮಹಾರಾಷ್ಟ್ರದಲ್ಲಿ 16 ವಲಸೆ ಕಾರ್ಮಿಕರು ರೈಲ್ವೆ ಹಳಿ ಮೇಲೆ ಮಲಗಿ ಮೃತಪಟ್ಟ ಘಟನೆಯನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.


ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದು ಆಯಾ ರಾಜ್ಯಗಳಿಗೆ ಸಂಬಂಧಪಟ್ಟ ವಿಷಯ. ಹಲವು ವಲಸೆ ಕಾರ್ಮಿಕರು ನಡೆದುಕೊಂಡು ಹೋಗಬಹುದು, ಅವರಲ್ಲಿ ಯಾರು ನಡೆದುಕೊಂಡು ಹೋಗುತ್ತಾರೆ, ಯಾರು ಹೋಗುವುದಿಲ್ಲ ಎಂದು ನೋಡಿ ಅವರನ್ನು ನಾವು ತಡೆಯುವುದು ಹೇಗೆ ಎಂದು ನ್ಯಾಯಾಧೀಶರು ಕೇಳಿದರು.


ರೈಲ್ವೆ ಹಳಿ ಮೇಲೆ ಮಲಗಿದ್ದಾಗ ಸಂಚರಿಸುತ್ತಿದ್ದ ರೈಲನ್ನು ತಡೆಯಲು ಹೇಗೆ ಸಾಧ್ಯ, ಅವರು ರೈಲು ಹಳಿ ಮೇಲೆ ಏಕೆ ಮಲಗಿದ್ದರು ಎಂದು ಪ್ರಶ್ನೆ ಮಾಡಿದರು.ಅರ್ಜಿ ಸಲ್ಲಿಸಿದ್ದ ಅಡ್ವೊಕೇಟ್ ಅವರನ್ನು ಉಲ್ಲೇಖಿಸಿ ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಛೀಮಾರಿ ಹಾಕಿದೆ.

SCROLL FOR NEXT